Friday, March 23, 2012

ಆಸ್ತಿಕತೆ v/s ಮುಗ್ದತೆ.


ಬೆಳೆಯುವ ಪ್ರತೀ ಹಂತದಲ್ಲಿ ಸಾಯುವ ಮುಗ್ಧತೆ ಕಾಲಾಂತರದಿ ಬೇರೂರಿ ನಿಂತ ಆಸ್ತಿಕತೆಗೆ ಒಂದೊಂದೇ ಕೊಡಲಿ ಪೆಟ್ಟನ್ನು ಹಾಕಿದೆ. ಅಜ್ಜಿ ಕಥೆಯ 7 ಸಾಗರದಾಚೆಯ ರಾಜಕುಮಾರಿ ಇಂದಿನ ತಲೆಮಾರಿಗೆ ಕೇಟ್ ವಿನ್ಸ್ಲೆಟ್, ಅಂಜೆಲಿನಾಜೂಲಿಯ ಪ್ರತಿರೂಪವಷ್ಟೆ.
ಅಡ್ಡಿ ಇಲ್ಲ... ಮುಗ್ದತೆ ಸಾಯಲೇ ಬೇಕು. ಅದರ ಸಾವಲ್ಲೇ ಜಗತ್ತಿನ ಬದುಕಿದೆ. ಆ ಬದುಕಿನಲ್ಲೇ ಇತಿಹಾಸದ ಅಸ್ತಿತ್ವವಿದೆ. ಕಳೆದ ವರುಷ ನಮ್ಮ ಮುಗ್ದತೆಯ ಒಂದು ಮಜಲನ್ನು ಕೊಂದಿದೆ. ಬದುಕಿನ ಗೋಡೆ ಇನ್ನೊ ಒಂದು ಹಂತಕ್ಕೆ ಮೇಲೇರಿದೆ. ಸಾವು-ಬದುಕಿನ ಲಾಸ್ಯದಂತಹ ಬೇವು-ಬೆಲ್ಲದ ಯುಗಾದಿ ಮತ್ತೆ ಬಂದಿದೆ..... "Be Practicle"ನಂತಹ ಬೇವಿನ ಬದುಕಿಗೆ ಆಸ್ತಿಕತೆಯೆಂಬ ಬೆಲ್ಲವೂ ಕೊಂಚ ಸೇರಲಿ. "ಹಳೆ ಬೇರು ಹೊಸ ಚಿಗುರು ಕೂಡಿದರೆ ಮರ ಸೊಗಸು", ಅಲ್ಲವೇ?

ನಿದ್ರಿಸಿರುವ ನಿಮ್ಮ ಆಸ್ತಿಕತೆಗೊಂದು ಮೊಟಕಿ, ಇಂದಾದರೂ ಮುಗ್ದತೆಯನ್ನ ಆಹ್ವಾನಿಸಿ. ಅದರೊಡಗೂಡಿ ದೇಸಿ ಸೊಗಡಿನ ಯುಗಾದಿಯನ್ನ ಆಚರಿಸಿ. ಸರ್ವಗಣ ಪ್ರಥಮ ಗಣುಮಾಮ ನಿಮ್ಮಗಳ ಬದುಕಿನ ಅನುದಿನವನ್ನೂ ಸಂತೋಷಕರವಾಗಿಡಲಿ ಎಂಬ ಹಾರೈಕೆಯೊಂದಿಗೆ

ನಿಮ್ಮ
ಅವಿ


Monday, February 6, 2012

ಮಕ್ಕಳಿರಲವ್ವ ಮನೆ ತುಂಬಾ!!!

ಅಂದಕಾಲತ್ತಿಲ್ ಈ ಮಾತಿತ್ತು. ಹೆರುವ ಮಕ್ಕಳಿಗನುಗುಣವಾಗಿ ಪಟ್ಟದರಸಿ ಪಟ್ಟವೂ ಗಿಟ್ಟುವ ಕಾಲವಿತ್ತು. ಇಂದು ಮಾತೆಗೆ ಈ ಮಾತೇ heavy ಆಗಿದೆ. ಸುಕ್ಕೂ ಚದುರದೆ ಹೆರುವ ಕಷ್ಟ ಹಾಗಿರಬಹುದೇನೋ?!! ಬಿಡಿ, ಗಂಡಸಿಗ್ಯಾಕೆ ಗೌರಿ ದುಖ:.  ಸ್ವಂತ  ಮನೆಯ ನನಸಿನೊಂದಿಗೆ ಅಮ್ಮ ಮಕ್ಕಳ ಜಂಜಾಟಕ್ಕೆ ಒಂದು break ಕೊಟ್ಟು, ದೇವ ಮಂದಿರಗಳಲ್ಲಿ ಮನಶಾಂತಿ ಹುಡುಕುವ ವಯಸ್ಸಿನಲ್ಲಿ ಮೂಕ ಜೀವಗಳಲ್ಲಿ ಕಂಬ-ಗೋಡೆಗಳ ನಡುವೆ ಸಿಗದ ಮನಶಾಂತಿ ಕಂಡುಕೊಂಡಿದ್ದಾಳೆ.

3 ವರುಷದ ಕೆಳಗೆ ನನ್ನ ಪಾಲಿನ ಕೈತುತ್ತು ಕಸಿದುಕೊಂಡ ಜಿಮ್ಮಿ, ಈಗ ಅಮ್ಮನೊಡನೆ ಕಳೆಯುವ ಸಮಯದಲ್ಲೂ ಪಾಲು ಕೇಳುತ್ತಿರುವ ರಾಮ-ಲಕ್ಷ್ಮಣ, ಶೀಘ್ರದಲ್ಲೇ ನಿರೀಕ್ಷಿಸಿರುವ 5-6 ಹಾರಲಾರದ 2 ಕಾಲಿನ ಅಪ್ಸರೆಯರು...... ನಾನುಗಳ ನಡುವೆ ಅವಳದಾಗಿ ಉಳಿಯದ ಮಕ್ಕಳಿಗಿಂತ "ನಾವುಗಳ" ಸಿದ್ದಾಂತದಲ್ಲಿ ನಂಬಿಕೆ ಇಟ್ಟವರೊಂದಿಗೆ ಅಮ್ಮ ಕಳೆದುಹೋಗುತ್ತಿದ್ದಾಳೆ.

ಅಮ್ಮ ಕಂಡುಕೊಂಡ ಮನಶಾಂತಿಗಾಗಿ ಖುಷಿಪಡುವುದೋ, ನಾನು ಕಳೆದುಕೊಂಡ ಅಮ್ಮನ ಒಡನಾಟದ ಗಳಿಗೆಗಳಿಗಾಗಿ ಮರುಗುವುದೊ.... ಒಟ್ಟಿನಲ್ಲಿ ತಿಂಗಳ ಮುಂಚೆಯೇ ನನ್ನ ಜೀವನದಲ್ಲಿ ಬೇವು-ಬೆಲ್ಲದ ಯುಗಾದಿ ಬಂದಿದೆ.

Wednesday, January 18, 2012

ಪ್ರಜಾಪ್ರಭುತ್ವದ ಕಂಬಕ್ಕೆ ಕುಟ್ಟು ಹಿಡಿದಿದೆ

ಬೆಂಗಳೂರೇನು ಇವರಪ್ಪನ ಮನೆ ಆಸ್ತಿಯೇ ಹೀಗೆ ಘಂಟೆಗಟ್ಟಲೆ ಐಸ್ ಕ್ರೀಂ ಮೆಲ್ಲುತ್ತಾ ಉಡಾಡಿತನ ತೋರಿಸಲಿಕ್ಕೆ?

ಒಂದೇ ಬೈಕಿನಲ್ಲಿ 3 ಜನ ಬುದ್ದಿಗೇಡಿ ವಕೀಲರು ಬರುತ್ತಿದ್ದಿದ್ದನ್ನು ಕಂಡ ಪೇದೆ ಕೇಳಿದ್ದೇ ತಡ,  ಕಳ್ಳು ಕುಡಿದ ಕೋತಿಯಂತೆ ಹಲ್ಲೆ ಮಾಡಿದ್ದೇ ಅಲ್ಲದೆ ಅಂಡು  ಸುಟ್ಟ ಬೆಕ್ಕುಗಳಂತೆ ಹೀಗೆ 7 ಘಂಟೆಗಳ ಕಾಲ "freedom for expression" ಹೆಸರಿನಲ್ಲಿ ಈ ಪರಿಯ ಗೂಂಡಾಗಿರಿ ಮಾಡಬಹುದೇ?

ಇಂಥಾ ಹುಂಬರಿಗೆ ಆಂಡಿಗೆರಡು ಕೊಡದೆ ಪೊಲೀಸರೂ ಕೂಡ ಸಂಧಾನದ ಹೆಸರಿನಲ್ಲಿ ಹುಲಿ-ಕುರಿ ಆಟ ಆಡಬಹುದೇ? ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಜನತೆಯ ನೆಮ್ಮದಿಯನ್ನೇ ಹರಾಜಿಗಿಟ್ಟ ಈ ಇಬ್ಬಂದಿಗಳಿಗೆ ಶಿಕ್ಷಿಸೋರು ಯಾರು? ಊರಿಗೆಲ್ಲ ಬುದ್ದಿ ಹೇಳುವ ಬೆಕ್ಕು ಒಲೆ ಮುಂದೆ ಉಚ್ಚೆ ಹುಯ್ದರೆ ಎಂತ ಮಾಡೋದು?

ಹಸಿವು, ಬೆದರಿಕೆಯಿಂದ ಕಂಗೆಟ್ಟು ಅತ್ತ ಮಕ್ಕಳು, ಇಹ-ಪರ ತಿಳಿಯದ ಪೋಷಕರು, ಕುಳಿತಲ್ಲೆ ಕಲ್ಲಾದ ವೃದ್ದರು, ಭಾಷೆ ಬಾರದೆ ಕಿದ್ವಾಯಿ ರಸ್ತೆ ತಿಳಿಯದೆ ಕಂಗೆಟ್ಟ ಪರವೂರಿನ ಅನಾರೋಗ್ಯಪೀಡಿತನ ಬಸುರಿ ಹೆಂಗಸು, ತ್ರಿಶಂಕು ಸ್ಟಿತಿಯಲ್ಲಿನ ಪ್ರಯಾಣಿಕರು, ಜನತೆಗೆ ಮಾರ್ಗದರ್ಶನ ಮಾಡದೆ ನಂ.1 ಗುಂಗಿನಲ್ಲೇ ತಗಲಾಕೊಂಡ ಎಫ್ ಎಂಗಳು.....ಡೈರಿ ವೃತ್ತದಿಂದ ಮಲ್ಲೇಶ್ವರ ತಲುಪಲು 4 ಘಂಟೆ 30 ನಿಮಿಷ.

ಇವರು ನಮ್ಮ so called ನಾಗರೀಕ ವಕೀಲರು, ಮಣ್ಣಿಗೆ ಹೋಗಲಿ ಇವರ ನಾಗರೀಕತೆ..... ಜನಸಾಮಾನ್ಯರ ದುಗುಡವನ್ನು ಅರಿಯದ ಈ ಮಂಕುದಿಣ್ಣೆಗಳಿಗೆ ನಮ್ಮ ಘನ ನ್ಯಾಯ ಕಾಯುವ ಕೆಲಸ.

ನಿಜಕ್ಕೂ ಇಂಥಾ ಬೇಜವಾಬ್ದಾರಿ ಹೀನಸುಳಿ ಜನರ ಹೊಲಸು ಕೆಲಸ, ಕಾದು ನೋಡುವ ತಂತ್ರದ ರಾಜಕಾರಣಿಗಳು....!!!!

ಇಂಥವರಿದ್ದರೆ ನ್ಯಾಯದೇವತೆಯ ಕಣ್ಣಷ್ಟೇ ಯಾಕೆ? ಮೈಯನ್ನೂ ಕೂಡ ಕಪ್ಪು ಬಟ್ಟೆಯಲ್ಲೇ ಸುತ್ತಬೇಕು.

Saturday, January 14, 2012

ಸಂಕ್ರಮಣ ಘಟ್ಟದಲ್ಲಿ....


"ಅಗ್ನಿರ್ಜ್ಯೋತಿರ್‌ ಅಹಃ ಶುಕ್ಲಃ ಷಣ್‌ಮಾಸ ಉತ್ತರಾಯಣಂ।
ತತ್ರ ಪ್ರಯಾತಾ ಗಚ್ಛಂತಿ ಬ್ರಹ್ಮ ಬ್ರಹ್ಮವಿದೋ ಜನಾಃ।"


ಇಹದ ದಕ್ಷಿಣಾಯನದಿಂದ ಮೋಕ್ಷದ ಉತ್ತರಾಯಣದ ಪಥಕ್ಕೆ ಸೂರ್ಯ 14ರ ಇಳಿಸಂಜೆ 6 ಘಂಟೆ 44 ನಿಮಿಷಕ್ಕೆ ಮಕರ ರಾಶಿ ಪ್ರವೇಶದೊಂದಿಗೆ ತನ್ನ ಯಾನ ಆರಂಭಿಸುತ್ತಾನೆ......
ಕಕ್ಷೆ ಪಥಗಳ ಕುರಿತು ಹಿರಿಯರ ವೈಜ್ಞಾನಿಕತೆಗೆ ತಲೆದೂಗುತ್ತಾ, ಬರಲಿರುವ ಪುಣ್ಯಕಾಲ ಅಂಧಕಾರದಲ್ಲಿ ಹುದುಗಿದ ಜನಮಾನಸದ ಸಮಸ್ತ ಭರವಸೆಗಳಿಗೂ ಜೀವಜಲವನ್ನುಣಿಸಲಿದೆಯೆಂಬ ಭರವಸೆಯಲ್ಲಿ,


"ಉಗ್ರರ  ಹೃದಯಕ್ಕೂ ಒಲಿಯಲಿ ಪ್ರೀತಿ...ಹರಸಲಿ ಸಂಕ್ರಾಂತಿ"


ಹಾರೈಕೆಯೊಂದಿಗೆ,
ನಿಮ್ಮ
ಅವಿ

Saturday, December 31, 2011

ಮತ್ತೆ ಹಾಡಲಿ ಕೋಗಿಲೆ...!!


ಒಂದು ವರ್ಷ ಅನುಭವದಲ್ಲಿ ಪಕ್ವತೆಗಳಿಸಿದ್ದಕ್ಕೆ ಖುಷಿಪಡಬೇಕೋ,  ಬದುಕಿನ ಮುತ್ತಿನ ಹಾರದಲ್ಲಿ ಒಂದು  ಮುತ್ತು ಕಮ್ಮಿಯಾಗಿದ್ದಕ್ಕೆ ಕಸಿವಿಸಿಪಡಬೇಕೋ... ಅರ್ಥವಿಲ್ಲದ ಆಲಾಪ.

"ಒಳ್ಳೆ ಕ್ಷಣಗಳ ಕೂಡಿಡಬೇಕು, ಬದುಕಿನ ನೆನಪಿಗೆ, ಋತುಗಳ ಜೂಟಾಟಕೆ"

ರೂಪಾಯಿ, ಚಿನ್ನ ಬೆಳ್ಳಿಯ ಹಗ್ಗ ಜಗ್ಗಾಟದಲ್ಲಿ ನಲುಗಿದ ಮಧ್ಯಮವರ್ಗ, ಭ್ರಷ್ಟಾಚಾರದ ವಿರುದ್ದದ  ಕಣ್ಣಾಮುಚ್ಚಾಲೆಯಲ್ಲಿ ಗೆದ್ದು ಸೋತ ಜನತೆ,  ಜಗತ್ತಿನೆಲ್ಲೆಡೆ ಕ್ರಾಂತಿಯ ಹೆಸರಿನಲ್ಲಿ ಉರುಳಿದ ಗದ್ದುಗೆಗಳು,  ಈ ಎಲ್ಲಾ ಭಾನಗಾಡಿಗಳ ಮಧ್ಯೆ ಸದ್ದಿಲ್ಲದೇ ಕರಗಿಹೋದ ಧ್ರುವಗಳ ಹಿಮಪದರ, ಇಳಿಯದ ಥರ್ಮೋಮೀಟರ್ ಪಾದರಸ.

ಬರುವ ಮನ್ವಂತರ ಬಳಲಿದ ಮನಗಳಿಗೆ ಹೊಸ ಚೇತನವನ್ನು ತರಲಿದೆಯೆಂಬ ಭರವಸೆಯಲ್ಲಿ

ಹಾರೈಕೆಯೊಂದಿಗೆ,
ನಿಮ್ಮ
ಅವಿ

Thursday, November 10, 2011

A Transition.... A Celeberation

ಬದಲಾವಣೆಯ ಗಾಳಿ ಬೀಸಲು ಇಷ್ಟು ಕಾಲ ಬೇಕಿತ್ತು.

2009ರ ಇಳಿ ಸಂಜೆ ನಾನು ಪ್ರಕಟಿಸಿದೆ "ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ" ಅನ್ನುವ ಮಾತಿಗೆ  ಇದೇ 13ರ ಶುಭ ಮುಂಜಾನೆಯಂದು ತೆರೆಬೀಳುತ್ತಿದೆ.

ನಮ್ಮ ಕನಸಿನರಮನೆ  "ಮನ್ವಂತರ" ನಮ್ಮ ಬಾಳುಗಳಲ್ಲೂ ಬದಲಾವಣೆಯ ತಂಗಾಳಿ ತರುವುದೆಂಬ ನಿರೀಕ್ಷೆಯೊಂದಿಗೆ ಭಾನುವಾರದ ಬೆಳಗ್ಗಿನ 7:30ರ ಚುಮ್ಮು ಚುಮ್ಮು ಚಳಿಯಲ್ಲಿ ಗೃಹ ಪ್ರವೇಶ ಮಾಡುವ ಹುನ್ನಾರದಲ್ಲಿದ್ದೇವೆ. :-)

 ಹತ್ತು ಗುಂಡಿ ತೊಡುವ ಬದಲು ಒಂದು ಬಾವಿ ತೋಡುವ ಪೆದ್ದು ನಾನು. ಇರುವ ಬೆರಳೆಣಿಕೆಯಷ್ಟುಗೆಳೆಯರ ಫೋನ್ ನಂಬರ್ ಇಟ್ಟುಕೊಳ್ಳಬೇಕೆನ್ನುವ ಕಾಮನ್ ಸೆನ್ಸ್ ಕೂಡ ಇಲ್ಲದ ಪಂಜುರ್ಲಿ. ಪರಿವರ್ತನೆಯ ಸೊಬಗಿಗೆ ನಮ್ಮವರೆನಿಸಿಕೊಂಡ ನೀವಿಲ್ಲದಿದ್ದರೆ ನಿಜಕ್ಕೂ ನಾವು ನಾವಾಗಿರುವುದಿಲ್ಲ.. ಇಂಥ ಹುಸಿ ಕೋಪದ ನಾಟಕದೊಂದಿಗೆ ನಿಮಗೆಲ್ಲರಿಗೂ ಆಮಂತ್ರಣವೀಯುತ್ತಿದ್ದೇನೆ.  ನಿಮ್ಮ ಆಗಮನದ ನಿರೀಕ್ಷೆಯಲ್ಲಿ.........





ಅನ್ನಪೂರ್ಣೇಶ್ವರಿ ನಗರ [ಕ್ಯಾತನಗೆರೆ ಲೇಔಟ್]
ಸೇಂಟ್. ಥಾಮಸ್ ಹೈ ಸ್ಕೂಲ್ ಹಿಂಭಾಗ.
ಚಾನಲ್ ರೋಡ್.
ಮಂಡ್ಯ-01

ನಕ್ಷೆ:








 

Tuesday, October 25, 2011

ಕತ್ತಲ ಕಣ್ಣುಗಳಲ್ಲಿನ ಸ್ನಿಗ್ದ ಹೊಳಪಿನ ನಿರೀಕ್ಷೆಯಲ್ಲಿ....

 "ಬೆಳಕನು ನುಂಗಿವೆ ಇಲ್ಲಿ ಕತ್ತಲ ಕಣ್ಣುಗಳು...
      ಮರೆವಿಗೆ ಸಂದಿವೆ ಇಲ್ಲಿ ಹರುಷದ ಬಣ್ಣಗಳು
           ತೋರು ಬಾ ಮನ್ವಂತರವೇ ಕನಸಿನೂರ ದಾರಿ...
                  ಸಾರು ಬಾ ಶುಭ ಸಂದೇಶ ಕಾಲ ರಥವನೇರಿ......!!! 

 ತಮ್ಮಿರುವಿಕೆಯನ್ನು ಮರೆತ ಮನುಷ್ಯರ ಮನುಷ್ಯತ್ವಗಳಿಗಾಗಿ ಕಾಲರಥವನ್ನು ನೆನೆಯುತ್ತಾ...
                  "ದೀಪಾವಳಿ ಹಬ್ಬದ ಶುಭಾಶಯಗಳು......."

ನಿಮ್ಮ
ಆವೀನ್

Saturday, October 15, 2011

ಸತ್ಯ, ಅದು ಹಿಡಿಬೂದಿಯೇ ಇರಲಿ, ವಸ್ತುನಿಷ್ಠವಾಗುತ್ತದೆ.


ಬಹಳ ದಿನಗಳ ನಂತರ ಓದಲೇ ಬೇಕೆಂದು ಓದಿದ್ದು ಕಾರಂತರ "ಆಳಿದ ಮೇಲೆ".



ಕಾರಂತರೇ ಪಾತ್ರಧಾರಿಯಾಗಿ ಹುಡುಕ ಹೊರಟಿರುವುದು ಅಳಿದ ಮೇಲೆ ಉಳಿದುದನ್ನು. ‘ಅಳಿದ ಮೇಲೆ’ ಯಲ್ಲಿಯ ಜೀವನದ ಅನ್ವೇಷಣೆ ಮಾತ್ರ ನೈತಿಕ ಹೊಣೆಗಾರಿಕೆಯಿಂದ ಪ್ರೇರಿತವಾದದ್ದು.ಇದರಲ್ಲಿನ ಪಾತ್ರಗಳಲ್ಲಿ ಎದ್ದು ಕಾಣುವ ಅಂಶ ಜೀವನಾಸಕ್ತಿ ಅಥವಾ ಬದುಕಿನಲ್ಲಿ ಶ್ರದ್ಧೆ, ಬದುಕಿನಲ್ಲಿ ಪ್ರಾಮಾಣಿಕತೆ. ’ಅಳಿದ ಮೇಲೆ’ ಕಾದಂಬರಿಯಲ್ಲಿ ಪುಟ ತಿರುಗಿಸಿಕೊಂಡು ಹೋಗಲು ಸಾಧ್ಯವಿಲ್ಲ. ಇದರಲ್ಲಿನ ಪ್ರತಿ ಘಟನೆ ವಿವರಣೆ, ಸಂಭಾಷಣೆಯನ್ನು ಗಮನಿಸಬೇಕು. ಅಲ್ಲಿರುವ ಅನುಭವದ ಪಕ್ವತೆ ನಮ್ಮ ಓಟವನ್ನು ತಡೆದು ನಿಲ್ಲಿಸಿ ಬದುಕಿನ ಸಂಕೀರ್ಣತೆ, ವಿಸ್ತಾರತೆಯತ್ತ ಬೆಟ್ಟು ಮಾಡುತ್ತದೆ.

ನನ್ನನ್ನು ಬಹಳ ಚಿಂತನೆಗೆ ಹಚ್ಚಿದ ಹಲವು ಸಾಲುಗಳಲ್ಲಿ ಕೆಳಗಿನವು ಪ್ರಮುಖವು.
  • ನಾನಿರುವುದು ಈಗ: ಸತ್ತ ಮೇಲಲ್ಲ. ಹುಟ್ಟುವ ಮೊದಲಿದ್ದಿರಲಿಲ್ಲ.ಸತ್ತ ಮೇಲೆಉಳಿಯುವುದು ನನ್ನ ನಡವಳಿಕೆಯ ನೆನಪು; ನಾನಲ್ಲ. ಇಲ್ಲದ ಆ ನನಗಾಗಿ ನಡೆಸುವ ಶ್ರಾದ್ದಾದಿ ಕ್ರಮಗಳುನನಗೆ ಸಮ್ಮತವಲ್ಲ.ನನಗೆ ಸಲ್ಲಿಸುವ ಶ್ರದ್ದೆ, ನನ್ನಲ್ಲಿ ಕಂಡ ಯಾವುದಾದರೂಒಳಿತು ಗುಣವಿದ್ದರೆ, ಅದನ್ನು ತಮ್ಮ ಬಾಳಲ್ಲಿ ತರುವುದು.ಅಂಥಾ ಶ್ರಾದ್ದವನ್ನುಯಾರು ಯಾರಿಗೆ ಬೇಕಾದರೂ ಮಾಡಬಹುದು. ಅದು ಮಾನವತೆಗೆ ಮಾಡುವ ಶ್ರಾದ್ದ;ವ್ಯಕ್ತಿಗಲ್ಲ.ಮಾನವಕುಲ ಚಿರಂತನ, ನಾವು ನಾಲ್ಕು ದಿನಗಳ ಒಂದು ದೃಶ್ಯ.

  • ಒಂದು ಸಮಾಜ, ಒಂದು ಕಾಲ, ಆ ಕಾಲದ ನಂಬಿಕೆ, ಆ ಸಮಾಜದ ವಿವಿಧ ಸನ್ನಿವೇಶಗಳು; ಆ ಸನ್ನಿವೇಶಗಳಲ್ಲಿ ಭಾಗಿಗಳಾದ, ಘಟನೆಗಳಲ್ಲಿ ಪಾತ್ರಗಳಾದ ವಿವಿಧ ಶೀಲ ಜನಗಳಿಂದಾಗಿ ಯಾವುದೋ ಮಾತು ಹೇಳಬೇಕೆನಿಸಿ ಹೊರಬೀಳುತ್ತದೆ. ಆ ಕಾಲ ಸರಿದ ಮೇಲೆ, ಹಿನ್ನಲೆಯಲ್ಲಿ ತಿಳಿದ ವ್ಯಕ್ತಿ ತೀರಿಕೊಂಡ ಮೇಲೆ, ನಮಗೆ ಉಳಿಯುವುದು ಜಡವಾಕ್ಯಗಳು; ಹತ್ತಾರು ಅರ್ಥಗಳನ್ನು ಕೊಡಮಾಡಬಲ್ಲ ಒಂದೊಂದು ಶಬ್ಧಗಳನ್ನೂ ಪೋಣಿಸಿ ಮಾಡಿದಂಥಾ ವಾಕ್ಯ ಸರಣಿಗಳು. ಅವುಗಳ ಮೇಲಿಂದಲೇ-ಬುದ್ದ ಹೀಗೆ ಹೇಳಿದ, ವಾಲ್ಮೀಕಿ ರಾಮನಿಂದ ಹೀಗೆಯೇ ಹೇಳಿಸಿದ , ಕೃಷ್ಣ ಹೇಳಿದ್ದೇ ಇದು- ಎಂಬ ದಿಟ್ಟತನವೇಕೋ? ಹಾಗೆ ಹೇಳಿದವರ ಕಾಲ ಸರಿದು ಸಾವಿರ. ಎರಡು ಸಾವಿರ ವರ್ಷ ಸಂದಿವೆ. ಆ ಕಾಲದ ಪ್ರವಾಹದಲ್ಲಿ ಹಿನ್ನಲೆಯೆಂಬುದು ಕೊಚ್ಚಿ ಹೋಗಿದೆ; ಬಳಸಿದ ಒಂದೊಂದು ಅರ್ಥವೂ ಮೂಲ ವ್ಯಾಪ್ತಿಯನ್ನು ಕಳೆದುಕೊಂಡಿರಬೇಕು. ಹೊಸ ಅರ್ಥ ಛಾಯೆಯನ್ನು ಪಡೆದಿರಬೇಕು. ಈಗಿನ ಭಾಷೆಯನ್ನು ಬಲ್ಲ ಮಾತ್ರಕ್ಕೆ, ಮೂಲ ಅರ್ಥ ಇದ್ದಕ್ಕಿದ್ದಂತೆಯೇ ಹೊಳೆದೀತೇ?

  • ನಿಜವಾದ ಸೂರ್ಯ ಮುಳುಗಿದ; ನಾಳೆ ಆತ ಬಂದಾನೆಂಬುದು ನಮ್ಮ ಅನುಭವ. ಆದ್ದರಿಂದಲೇ, ಮನುಷ್ಯ ಒಂದು ದಿನ ಸತ್ತರೂ, ನಾಳೆಯ ದಿನಇನ್ನೊಂದು ದೇಹವನ್ನುತಾಳಿ ಬರುತ್ತಾನೆ-ಎಂಬ ಭಾವನೆ ಮೊಳಗಿರಬೇಕು ಮನುಷ್ಯನ ಹೃದಯದಲ್ಲಿ. ಸಾಯುವುದಕ್ಕೆ ಇಷ್ಟವಿಲ್ಲದ ಮನುಸ್ಸುಅಂಥಾ ಕಲ್ಪನೆಗಳನ್ನು ತಾನೇ ಹೆಣೆಯಬೇಕು? ಈ ಸೂರ್ಯನಾದರೆ ತನಗಿರುವ ಕಾಯದೊಂದಿಗೆ ನಾಳೆಯೂ ಬರುತ್ತಾನೆ; ನಾಡಿದ್ದೂ ಬರುತ್ತಾನೆ;ದಿನ ದಿನವೂ ಬರುತ್ತಿರುತ್ತಾನೆ. ನಾವು! ಶರೀರವನ್ನು ಕಳಚಿ ಬಿಟ್ಟುಹೋಗುವ ಮಾನವ ಜೀವಿಗಳು; ಪುನರ್ಜನ್ಮದಲ್ಲಿ ಮತ್ತೊಂದು ಕಾಯಕವನ್ನು ಧರಿಸಿ ಬರುತ್ತೇವಂತೆ! ಈ “ಸೂರ್ಯ” ತಿರುಗಿ ಬಂದರೆ“ನಿನ್ನೆ ಬಂದು ಹೋದ ಸೂರ್ಯ ಇವನೇ”ಎಂಬುದನ್ನ ನಾವು ಗುರುತಿಸುತ್ತೇವೆ, ಮಾನವಪುನರ್ದೇಹಿಯಾಗಿ ಬಂದರೆ ಅವರನ್ನು ಗುರುತಿಸಬಲ್ಲೆವೇ? ಎಂದೂ ಇಲ್ಲ, ಗುರುತಿಸಿದವರಿಲ್ಲ. ಆದರೂ ಅಂಥಾ ಒಂದು ಹಂಬಲ ನಂಬಿಕೆಯಾಗಿ ನಮ್ಮ ಭಾವನೆಗಳಲ್ಲಿ ಬೇರೂರಿದೆ!ನಾವು ಹಿಂದೆ ಯಾವ ಅವತಾರ ತಾಳಿದ್ದೋ, ನಾಳೆ ಯಾವ ಜನ್ಮ ತಾಳಬಹುದು ಎಂದು ತಿಳಿಯಲಾರೆವಾದರೂ, ನಮ್ಮ ದೇವರ ಜನ್ಮಗಳನ್ನೆಲ್ಲಾ ನಾವು ಗುರುತಿಸಿದ್ದೇವೆ.ತಾನು ಸಹ ಚಿರಂತನವಾಗಿ ಬದುಕಬೇಕೆಂಬ ಆಸೆಯಿಂದ ಅವನು ಹೀಗೆ ಮಾಡುತ್ತಿರಬೇಕಲ್ಲವೇ?

  • ಹಾಲು ಹಾಲು ಬೆರೆತರೆ , ಅದು ಹಾಲು ಅಥವಾ ತುಂಬು ಹಾಲು . ಹಾಲು ನೀರು ಬೆರೆತರೆ ಬಣ್ಣ ಮಾತ್ರ ಹಾಲು , ಅದರ ರುಚಿ ಹಾಲಿನದಲ್ಲ . ಹಾಲು ಮಜ್ಜಿಗೆ ಬೆರೆತರೆ ಹಾಲಿನ ಸ್ವರೂಪವೇ ಉಳಿಯಲಾರದು . ಜೊತೆಗೆ ಅದು ತಾಮ್ರದಪಾತ್ರೆಯನ್ನು ಸೇರಿದರೆ ಕಿಲುಬದೆ ಉಳಿದೀತು ಹೇಗೆ?

  • ಮನುಷ್ಯ ಹುಟ್ಟುತ್ತಾನೆ , ಬಾಳುತ್ತಾನೆ , ಸಾಯುತ್ತಾನೆ . ಅವನ ಹುಟ್ಟಿನೊಂದಿಗೇ ಹುಟ್ಟಿಕೊಳ್ಳುವ ಬಾಂಧವ್ಯಗಳು , ಅವನನ್ನು ಬಂಧನದ ಬಳ್ಳಿಯಂತೆ ಸುತ್ತಿಕೊಳ್ಳುತ್ತವೆ . ಅಲ್ಲಿ ಸ್ವಾರ್ಥವೂ ಇರುತ್ತದೆ , ನಿಸ್ವಾರ್ಥವೂ ಇರುತ್ತದೆ . ನಂತರ ಬರುವ ಮಿತ್ರ ವರ್ಗದಲ್ಲಿ ವಂಚನೆಯೂ ಇರುತ್ತದೆ, ಉಪಕಾರವೂ ಇರುತ್ತದೆ . ಇವೆಲ್ಲ ಬಂಧನಗಳಿಗಿಂತ ಬಿಗಿಯಾದ , ಎಡೆಬಿಡದ ಬಂಧನವಾದ ದಾಂಪತ್ಯದಲ್ಲಿ ವಂಚನೆಗಳಿದ್ದರೆ ಅದು ಪ್ರತ್ಯಕ್ಷ ನರಕ . ಇಂತಹ ಗೋಜಲುಗಳಿಂದ ಕೂಡಿದ ಸಂಕೀರ್ಣ ಜೀವನದಲ್ಲಿಯೂ , ಒಬ್ಬ ವ್ಯಕ್ತಿ ಎಷ್ಟು ಸಮಾಜ ಮುಖಿಯಾಗಿ ಬದುಕಿದ ? ಅವನ ಹುಟ್ಟು ಮನುಷ್ಯ ಕುಲಕ್ಕೆ ಹೊರೆಯೇ ?ಸಹಕಾರಿಯೇ ? ಅವನು ನುಂಗಿದ ದುಃಖಗಳಿಗಿಂತಾ ಹಂಚಿದ ಸುಖ ಹೆಚ್ಚೇ ? ಕಡಿಮೆಯೇ ? ಅವನ ಒಟ್ಟೂ ಬದುಕೆಂಬುದು ಅನ್ಯರ ವಿಷಯದಲ್ಲಿ ಎಷ್ಟು ಸಹ್ಯವಾಗಿತ್ತು?
ಬದುಕಿನ ಒಂದು ಮೂಲಭೂತ ಅಂಶವಾದ ಕಾಮವನ್ನು ಕಾರಂತರು ಆರಾಧಿಸುವುದೂ ಇಲ್ಲ, ಧಿಕ್ಕರಿಸುವುದೂ ಇಲ್ಲ, ಒಪ್ಪಿಕೊಳ್ಳುತ್ತಾರೆ. ಕಾರಂತರ ನಿಲುವಿನಂತೆ ಬಾಳ್ವೆಯ ಪ್ರಶ್ನೆಯು ಒಬ್ಬರು ಬಾಳಿ, ಇನ್ನೊಬ್ಬರು ಉತ್ತರಿಸಿ, ಮೂರನೆಯವರು ಒಪ್ಪಿ ಸಾಗುವಂತಹ ಪ್ರಶ್ನೆ ಎಂದೂ ಆಗಿರಲಾರದು. ಅನಿವಾರ್‍ಯವಾಗಿರುವ ಬಾಳಿನ ರೀತಿಯನ್ನು ಕಂಡರೆ, ಅದು ಅವರವರು ಬಾಳಿ ಬದುಕಿ, ಅನುಭವಿಸಿ, ಹೋರಾಡಿ, ಪರಿಸ್ಥಿತಿಗಳಿಗೆ ಹೊಂದಿಕೊಂಡು ಪರಿಣಾಮಗೊಳ್ಳಬೇಕಾದ ಸಮಸ್ಯೆ.

ಓದಿದ ದಿನ ಪೂರ್ತಿ ನಾನು ನಾನಾಗಿರಲಿಲ್ಲ....

Wednesday, July 13, 2011

ಬ್ರಿಟೀಷರನ್ನು ಭಾರತದಷ್ಟೇ ಪ್ರೀತಿಸುತ್ತೇನೆ.

ಕಸಬ್ ಹುಟ್ಟುಹಬ್ಬದ ಉಡುಗೊರೆಯನ್ನ ಅವನ ಜೊತೆಗಾರರು ಭರ್ಜರಿಯಾಗೆ ನೀಡಿದ್ದಾರೆ.

ಮನಮೋಹನ್, ಸೋನಿಯಾ, ಚಿದು ನಿಮ್ಮ ಅಲ್ಪಸಂಖ್ಯಾತರ ಏಳಿಗೆಗಾಗಿ ಮುಂದಿನ ಪ್ಯಾಕೇಜ್ ಯಾವಾಗ ಘೋಷಿಸೋರಿದ್ದೀರಾ?

a. ಎಲ್ಲಾ ರಾಜ್ಯಗಳಲ್ಲಿ ಕಟ್ಟೆಚ್ಚರ
b. ಪಾಕ್ ಪ್ರೇರಿತ ಸಂಚು: ಕೃಷ್ಣ
c. ಬಾಂಬ್ ಸ್ಫೋಟಿಸಲು ಸುಧಾರಿತ ತಂತ್ರಜ್ಞಾನ ಬಳಕೆ: ಮುಂಬೈ ಪೋಲಿಸ್
d. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ, ಸಿಮಿ ಭಯೋತ್ಪಾದಕ ಸಂಘಟನೆಗಳೆಂಬುದಕ್ಕೆ ಸಾಕ್ಷಿ ಹುಡುಕಾಟದಲ್ಲಿ ಪೊಲೀಸರು.

ನಿಜಕ್ಕೋ ಭಾರತವೆಂಬುದು ಶತಮಾನದ ಪ್ರಹಸನ.

ಚರ್ಚಿಲ್ಲನ ಮಾತು 100% ಸತ್ಯ. "ಭಾರತೀಯರಿಗೆ ಆಳಲಿಕ್ಕೆ ಗೊತ್ತಿಲ್ಲ, ಅವರು ಆಲಿಸಿಕೊಳ್ಳಲಿಕ್ಕಷ್ಟೆ ಲಾಯಕ್ಕು"
ನೋವಿದೆ.. ಆದರೆ ತೀರ್ಮಾನವೂ ಅದೇ. ಇಂದಿನವರಿಗಿಂತ ಅಂದಿನವರೆ ಎನಗಿಷ್ಟ.

Thursday, May 5, 2011

ಅರ್ಧಸತ್ಯ

ದೇವರನ್ನು ಸೃಷ್ಟಿಸಿದ ಮನುಷ್ಯ ತಾನು ಸೃಷ್ಟಿಸಿದ ದೇವರ ದೈವತ್ವಕ್ಕೆ ಏರುವ ಎಲ್ಲಾ ಹಂತದಲ್ಲೂ ಮುಗ್ಗರಿಸಿದ್ದಾನೆ. ಹಿಂದುವೋ, ಕ್ರಿಸ್ತನೋ, ಮುಸಲ್ಮಾನನೋ, ಯಾವನೋ ತಾನೇ ಸೃಷ್ಟಿಸಿದ, ಬದುಕುತ್ತಿರುವ ಧರ್ಮದ ತಿರುಳಿನ ಭಾಗ ಜೀವನಕ್ಕಿಂತ ಪುಸ್ತಕದಲ್ಲೇ ಕಾಣಲು ಇಚ್ಚಿಸುತ್ತಾನೆ. ಕೊಂಚ ಎಡವಟ್ಟಾಗಿ ನಿಜಕ್ಕೂ ಕಾಣ ಬೇಕು ಅಂದರೆ ತನ್ನ ಪಕ್ಕದ ಮನೆ, ರಾಜ್ಯ ದೇಶದಲ್ಲಿ ಕಾಣಬಯಸುತ್ತಾನೆಯೇ ಹೊರತು ತನ್ನ ಮನೆ, ರಾಜ್ಯ ದೇಶದಲ್ಲಲ್ಲ.
ಎಡವುವ ಹೆಜ್ಜೆ ಒಬ್ಬರಲ್ಲಿ ಕಮ್ಮಿ ಇರಬಹುದು ಒಬ್ಬರದು ಹೆಚ್ಚಿರಬಹುದು. ನೈಜ್ಯ ಕಾಳಜಿಯಿಂದ ಎಲ್ಲವನ್ನೂ/ಎಲ್ಲರನ್ನೂ ಶಿಕ್ಷಿಸುವುದು ಶಿಕ್ಷಿತರ ಧರ್ಮ. ಅದಕ್ಕೆ ಹಿಂದೂ, ಮುಸಲ್ಮಾನ, ಕ್ರಿಸ್ತ ಅನ್ನೋ ಭೇದ ಬೇಕಾ?

ಯಾಕೋ ಗಂಟು ಮಾಡುವ ಪೂಜಾರಿ ಚಿತ್ರಿತವಾದಷ್ಟು ವ್ಯಂಗ್ಯವಾಗಿ ಅನಾಚಾರ ಮಾಡಿದ ಪಾದ್ರಿಗಳು, ಹಾರದ ಮಾಡಿದ ಮುಲ್ಲಾಗಳು ಚಿತ್ರಿತವಾಗಿಲ್ಲ. ಪಾಪಾಕ್ಕೂ partiality ಇದ್ಯಾ ತಂದೆ?