Wednesday, January 18, 2012

ಪ್ರಜಾಪ್ರಭುತ್ವದ ಕಂಬಕ್ಕೆ ಕುಟ್ಟು ಹಿಡಿದಿದೆ

ಬೆಂಗಳೂರೇನು ಇವರಪ್ಪನ ಮನೆ ಆಸ್ತಿಯೇ ಹೀಗೆ ಘಂಟೆಗಟ್ಟಲೆ ಐಸ್ ಕ್ರೀಂ ಮೆಲ್ಲುತ್ತಾ ಉಡಾಡಿತನ ತೋರಿಸಲಿಕ್ಕೆ?

ಒಂದೇ ಬೈಕಿನಲ್ಲಿ 3 ಜನ ಬುದ್ದಿಗೇಡಿ ವಕೀಲರು ಬರುತ್ತಿದ್ದಿದ್ದನ್ನು ಕಂಡ ಪೇದೆ ಕೇಳಿದ್ದೇ ತಡ,  ಕಳ್ಳು ಕುಡಿದ ಕೋತಿಯಂತೆ ಹಲ್ಲೆ ಮಾಡಿದ್ದೇ ಅಲ್ಲದೆ ಅಂಡು  ಸುಟ್ಟ ಬೆಕ್ಕುಗಳಂತೆ ಹೀಗೆ 7 ಘಂಟೆಗಳ ಕಾಲ "freedom for expression" ಹೆಸರಿನಲ್ಲಿ ಈ ಪರಿಯ ಗೂಂಡಾಗಿರಿ ಮಾಡಬಹುದೇ?

ಇಂಥಾ ಹುಂಬರಿಗೆ ಆಂಡಿಗೆರಡು ಕೊಡದೆ ಪೊಲೀಸರೂ ಕೂಡ ಸಂಧಾನದ ಹೆಸರಿನಲ್ಲಿ ಹುಲಿ-ಕುರಿ ಆಟ ಆಡಬಹುದೇ? ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಜನತೆಯ ನೆಮ್ಮದಿಯನ್ನೇ ಹರಾಜಿಗಿಟ್ಟ ಈ ಇಬ್ಬಂದಿಗಳಿಗೆ ಶಿಕ್ಷಿಸೋರು ಯಾರು? ಊರಿಗೆಲ್ಲ ಬುದ್ದಿ ಹೇಳುವ ಬೆಕ್ಕು ಒಲೆ ಮುಂದೆ ಉಚ್ಚೆ ಹುಯ್ದರೆ ಎಂತ ಮಾಡೋದು?

ಹಸಿವು, ಬೆದರಿಕೆಯಿಂದ ಕಂಗೆಟ್ಟು ಅತ್ತ ಮಕ್ಕಳು, ಇಹ-ಪರ ತಿಳಿಯದ ಪೋಷಕರು, ಕುಳಿತಲ್ಲೆ ಕಲ್ಲಾದ ವೃದ್ದರು, ಭಾಷೆ ಬಾರದೆ ಕಿದ್ವಾಯಿ ರಸ್ತೆ ತಿಳಿಯದೆ ಕಂಗೆಟ್ಟ ಪರವೂರಿನ ಅನಾರೋಗ್ಯಪೀಡಿತನ ಬಸುರಿ ಹೆಂಗಸು, ತ್ರಿಶಂಕು ಸ್ಟಿತಿಯಲ್ಲಿನ ಪ್ರಯಾಣಿಕರು, ಜನತೆಗೆ ಮಾರ್ಗದರ್ಶನ ಮಾಡದೆ ನಂ.1 ಗುಂಗಿನಲ್ಲೇ ತಗಲಾಕೊಂಡ ಎಫ್ ಎಂಗಳು.....ಡೈರಿ ವೃತ್ತದಿಂದ ಮಲ್ಲೇಶ್ವರ ತಲುಪಲು 4 ಘಂಟೆ 30 ನಿಮಿಷ.

ಇವರು ನಮ್ಮ so called ನಾಗರೀಕ ವಕೀಲರು, ಮಣ್ಣಿಗೆ ಹೋಗಲಿ ಇವರ ನಾಗರೀಕತೆ..... ಜನಸಾಮಾನ್ಯರ ದುಗುಡವನ್ನು ಅರಿಯದ ಈ ಮಂಕುದಿಣ್ಣೆಗಳಿಗೆ ನಮ್ಮ ಘನ ನ್ಯಾಯ ಕಾಯುವ ಕೆಲಸ.

ನಿಜಕ್ಕೂ ಇಂಥಾ ಬೇಜವಾಬ್ದಾರಿ ಹೀನಸುಳಿ ಜನರ ಹೊಲಸು ಕೆಲಸ, ಕಾದು ನೋಡುವ ತಂತ್ರದ ರಾಜಕಾರಣಿಗಳು....!!!!

ಇಂಥವರಿದ್ದರೆ ನ್ಯಾಯದೇವತೆಯ ಕಣ್ಣಷ್ಟೇ ಯಾಕೆ? ಮೈಯನ್ನೂ ಕೂಡ ಕಪ್ಪು ಬಟ್ಟೆಯಲ್ಲೇ ಸುತ್ತಬೇಕು.

Saturday, January 14, 2012

ಸಂಕ್ರಮಣ ಘಟ್ಟದಲ್ಲಿ....


"ಅಗ್ನಿರ್ಜ್ಯೋತಿರ್‌ ಅಹಃ ಶುಕ್ಲಃ ಷಣ್‌ಮಾಸ ಉತ್ತರಾಯಣಂ।
ತತ್ರ ಪ್ರಯಾತಾ ಗಚ್ಛಂತಿ ಬ್ರಹ್ಮ ಬ್ರಹ್ಮವಿದೋ ಜನಾಃ।"


ಇಹದ ದಕ್ಷಿಣಾಯನದಿಂದ ಮೋಕ್ಷದ ಉತ್ತರಾಯಣದ ಪಥಕ್ಕೆ ಸೂರ್ಯ 14ರ ಇಳಿಸಂಜೆ 6 ಘಂಟೆ 44 ನಿಮಿಷಕ್ಕೆ ಮಕರ ರಾಶಿ ಪ್ರವೇಶದೊಂದಿಗೆ ತನ್ನ ಯಾನ ಆರಂಭಿಸುತ್ತಾನೆ......
ಕಕ್ಷೆ ಪಥಗಳ ಕುರಿತು ಹಿರಿಯರ ವೈಜ್ಞಾನಿಕತೆಗೆ ತಲೆದೂಗುತ್ತಾ, ಬರಲಿರುವ ಪುಣ್ಯಕಾಲ ಅಂಧಕಾರದಲ್ಲಿ ಹುದುಗಿದ ಜನಮಾನಸದ ಸಮಸ್ತ ಭರವಸೆಗಳಿಗೂ ಜೀವಜಲವನ್ನುಣಿಸಲಿದೆಯೆಂಬ ಭರವಸೆಯಲ್ಲಿ,


"ಉಗ್ರರ  ಹೃದಯಕ್ಕೂ ಒಲಿಯಲಿ ಪ್ರೀತಿ...ಹರಸಲಿ ಸಂಕ್ರಾಂತಿ"


ಹಾರೈಕೆಯೊಂದಿಗೆ,
ನಿಮ್ಮ
ಅವಿ