Saturday, January 1, 2022

ಸವೆಸಿದ್ದಾಯಿತು..... ಸವಿಯೋಣ !!!!


ತಿರುಗಿ ನಿಂತಿದ್ದೇನೆ ಮತ್ತದೇ ಕಾಲಘಟ್ಟದಲ್ಲಿ....

ಸವಿದ, ಸಹಿಸಿದ, ವರ್ಜಿಸಿದ ಹಳೆಯ ನೆನಪಿನ ಬುತ್ತಿಗೆ ಅರ್ಘ್ಯ ನೀಡಿ ಭೂತಕ್ಕೆ ತಳ್ಳಿ, ಹೊಸ ಬದುಕಿನ ಭರವಸೆಯ ಹೊಸತಿಲಲ್ಲಿ...

ಬರುವುದಾ ಇನ್ನಾದರೂ ಹೊಸತನ? 

ಬದುಕಿನ ಮಗ್ಗುಲಲ್ಲಿ ಧುತ್ತೆಂದು ನಿಂತ ಅಗಾಧ ಅಡೆತಡೆಗಳು ಅಂದುಕೊಂಡಿದ್ದಕ್ಕಿಂತ ಸಲೀಸೇ ಅನ್ನುವಷ್ಟು ಹಗುರುತನದಲ್ಲಿ ಪಕ್ಕ ಸರಿದಾಗ ಮೂಡಿದ ಹರುಷ, ಆ ಹಗುರಿನ  ಜೊತೆಜೊತೆಗೆ ಜೀವನಪೂರ ಜೊತೆವುಳಿದ ಮಗ್ಗಲಿನ ಸಿಗುರು. ಒಟ್ಟಿನಲ್ಲಿ  ಅಶ್ವಥಾಮನ ಚಿರಂಜೀವಿತನ.. ಜೊತೆಗೆ ಮಾಗದ, ಆರದ ಮಸ್ತಕದ ಗಾಯ.

ಇರಲಿ..‌ 

ವರ್ಷ ಸವಿಸಿದ್ದು  ಸಾಕು..ಇನ್ನಾದರೂ ವರ್ಷವನ್ನ ಹರ್ಷದಲ್ಲಿ ಬದುಕುವ ಹಂಬಲ. 

"ಇನ್‌ದಿನೋ  ದಿಲ್‌ಮೆರಾ

ಮುಜ್ಸೆ ಏ ಕೆಹ್ ರಹಾ

ತೂ ಖ್ವಾಬ್ ಸಜಾ

ತೂ ಜೀಲೇ ಜ಼ರಾ

ಹೈ ತುಜೆ ಭಿ ಇಜ಼ಾಜತ್

ಕರ್ಲೆ‌ ಖುದ್ ಸೆ ಮೊಹಬ್ಬತ್

ಅಷ್ಬಕ್ಕೂ ಬದಲಾದದ್ದೇನು? 

ತುಂಬಾ!!!  ಮಾಗದ ವೃಣದಂತಿದ್ದ ಹಲವು ಸಂಬಂಧಗಳ ಮಹಾಪ್ರಸ್ಥಾನ‌( ವ್ಯವಕಲನ),  ಕಷ್ಟದ ಹಾದಿಯಲ್ಲಿ ಗ್ರೀಷ್ಮೃಋತುವಿನ ಮಲಯ ಮಾರುತದಂತೆ ತಂಪೆರೆದ ಹಲವು ಹೆಸರೇ ಬೇಡದ ಸಂಬಂಧಗಳು (ಸಂಕಲನ). ಕಳೆದುಕೊಂಡಿದ್ದಕ್ಕೆ ಹೋಲಿಸಿದರೆ‌ ಪಡೆದಿದ್ದೇ ಅಧಿಕ.  

ಹಿಂದಿರಲಿಲ್ಲವಾ!! ಇಂದಿನದರಲ್ಲೇನು ಅಂಥಾ ವಿಶೇಷ‌. ಇಲ್ಲ‌! ಎಳ್ಳಷ್ಟೂ ಇಲ್ಲ. ಅರ್ಜುನನ ಬತ್ತಳಿಕೆಗೆ ಸರ್ಪಾಸ್ತ್ರದ  ಜೊತೆಗೆ ಪಾಶುಪತಾಸ್ತ್ರ. ಅವುಗಳ ನೆಲೆಯಲ್ಲಿ ಅವಕ್ಕೇ ಅವೇ ಸಾಟಿ. ಇನ್ನಾದರೂ ಹೂಡಲೇ 18 ಪರ್ವದಿನದ ಕುರುಕ್ಷೇತ್ರ.

 ಯಾರೊಂದಿಗೆ!? ಗತಿಸಿದ ಭೂತದೊಂದಿಗೆ? 

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅಂತರಾಳವ!!

ಅದು ಅನವಶ್ಯಕ!!

ಮತ್ತಾರೊಂದಿಗೆ!? ಮಸುಕಾದ ಭವಿಷ್ಯತ್ತಿನೊಡನೆ? ಗಾಳಿಯೊಡನೆ ಗುದ್ದಾಟದ ವ್ಯರ್ಥ ಯತ್ನ. 

ಇನ್ನಾರೊಂದಿಗೆ!? ಹ್ಮ್ಮ್ಮ್ !!! ಹೊಳೆಯಿತು. ಹಾದಿ ಬಿಟ್ಟ ವರ್ತಮಾನದೊಂದಿಗೆ? ಹೌದು, ಅತ್ಯವಶ್ಯಕ.

 ಕೃಷ್ಣ ?  ಇದ್ದ, ಇದ್ದಾನೆ, ಇರುತ್ತಾನೆ (ಇದಲ್ಲವೇ  ಪೃಷ್ಠ ಗಾಂಚಲಿ ಅಂದರೆ 😹).  ಬದುಕಿನ ಗಾಢಾಂಧಕಾರದಲ್ಲಿ ಭರವಸೆಯ ಕಿರಣ ಬೀರಲು‌, ಕಾಲ ಕಾಲಕ್ಕೆ ಕಿಲುಬೆಣ್ಣೆ ಸುರಿದು ಹಾದಿಗೆ ತರಲು. 

ಸಂಗಡ? ಅಮೀನುಲ್ಲನ ಅದೃಷ್ಟ ಅಷ್ಟು ಕೆಟ್ಡಿಲ್ಲ‌. ಪಂಚ ಪಾಂಡವರಿಲ್ಲದಿದ್ದರೂ ಇರುವ ಮೂರು ಮತ್ತೊಬ್ಬ ಮನಸ್ಸಲ್ಲಿ ಮೂಡಿಸಿರುವ ಭರವಸೆ  ಕಮ್ಮಿಯೇ!!? ಉಳಿದೆಲ್ಲೆಡೆ ಕೈಕೊಟ್ಟ ಕಾಣದ ದೇವರು ಈ ಒಂದು ವಿಷಯದಲ್ಲಿ ಕೈ ಹಿಡಿದಿದ್ದಾನೆ. ಜೊಳ್ಳೆಲ್ಲಾ ತೂರಿ ಕಾಳಷ್ಟೇ ಉಳಿದ ಈ ಘಳಿಗೆಯಲ್ಲಿ ಅನಿಸಹತ್ತಿರುವುದು

"ಸಗ್ಗದ ಸಿರಿ ಬಂತೊ ನನ್ನ ಬದುಕಲಿ

ಸುಗ್ಗಿಯ ಸೊಬಗಿಂದ"

ಇರಬಹುದೇ ಇದು?  ಅದೇ ಕಾದು ಕುಳಿತ ಅಮೃತಘಳಿಗೆ. ಅದೇ ಭರವಸೆಯಲ್ಲಿ ಬದುಕುವ ಹಂಬಲ ತಾನೇ ತಾನಾಗಿದೆ‌. 

 ಹಳೆ ಬೇರು, ಹೊಸ‌ ಚಿಗುರು ಸೇರಿದರೆ ಮರ ಸೊಗಸು.  ಕಲಿತ ಪಾಠ(ಕಲಿತಿದ್ದೇ ಆದರೆ), ಅಳವಡಿಸಿಕೊಂಡ ಅನುಭವ ( ತಿಳಿದಿದ್ದೇ ಆದರೆ) ಹಿಂದನದನ್ನು ಪುನರಾವರ್ತಿಸುವುದಿಲ್ಲವೆಂಬ  ನೆಮ್ಮದಿ.  ಆ ಒಂದು ಧೈರ್ಯದಿ ಹೊಸತನದೆಡೆಗೆ ಮುನ್ನಡಿಯಿಡುವ ಅದಮ್ಯ ಬಯಕೆ. 

"ಕರೆ ಬಂದಿತಣ್ಣ, ತೆರೆ ಬಂದಿತಣ್ಣ, ನೆರೆ ಬಂದಿತಣ್ಣ ಬಳಿಗೆ,

ಹರಿತsದ ಭಾವ, ಬೆರಿತsದ ಜೀವ ಅದರೊಳಗೆ ಒಳಗೆ ಒಳಗೆ.

ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್‌ನಿಮ್ಮ ಆತ್ಮಗಳಿಗೆ.

ಅಂಬಿಗನು ಬಂದ, ನಂಬಿಗನು ಬಂದ ಬಂದsದ ದಿವ್ಯಗಳಿಗೆ"

ಅಂಬಿಗ, ನಂಬಿಗ, ಸಮಯ ಎಲ್ಲಾ ಕಕ್ಷೆಯಲ್ಲಿ ಸಮನಾಂತರದಲ್ಲಿ ಉಪಸ್ಥಿತರಿರುವ ಈ ಹೊತ್ತಲ್ಲಿ,  ಕೋಲನೂರಿ ಅವಸಾನದಂಚಿಗೆ  ತೆವಳುತ್ತಿರುವ 2021, ಅಂಬೆಗಾಲನಿಟ್ಟು ಬಟ್ಟಲ ಕಣ್ಣಲ್ಲಿ ಜಗತ್ತು ಕಾಣುವ ತವಕದಲ್ಲಿರುವ 2022 , ಇವರಿಬ್ಬರ ನಡುವಿನ ನಾನು ನಾನಾಗಿ ಬದಲಾವಣೆಯ ಪರ್ವಕ್ಕೆ ಮುನ್ನಡಿಯಿಡುವ ಈ ಸಂದರ್ಭದಲ್ಲಿ ಕಾಯ, ವಾಚ, ಮನಸ ಪಡೆದಿರುವುದೆಲ್ಲವನ್ನ ಅಂತೇ ಕಾಪಿಡುವ ಮನಸ್ಥೈರ್ಯದೊಡನೆ ದೇವರಲ್ಲಿ  ನನ್ನ ಅರಿಕೆ ಇಷ್ಟೇ!!

"ಕೊಡು ನಮಗೆ  ಇನ್ನಾದರೂ, ಸವೆಸುವ ಮಾಸಗಳನ್ನಲ್ಲ, ಸವಿಯುವ ಕ್ಷಣಗಳನ್ನ "

ಆ ಎಲ್ಲಾ ಸವಿಯುವ ಕ್ಷಣಗಳಲ್ಲಿ ನಿಮ್ಮ ಉಪಸ್ಥಿತಿ ಅತ್ಯವಶ್ಯಕ!! (ನಿಮಗದು  ಇಷ್ಟವೋ,ಗೊಳೋ😝‌)

ಹೊಸತನ  ಗೋಡೆಗೆ ನೇತು ಹಾಕಿದ ಕ್ಯಾಲಂಡರ್ ಅಲ್ಲಷ್ಟೇ ಅಲ್ಲ.. ನಮ್ಮ‌ನಿಮ್ಮೆಲ್ಲರ ಬದುಕಲ್ಲೂ ಬಯಸಿದ ಬದಲಾವಣೆಯ ಪರ್ವ ತರಲೆಂಬ ಹಾರೈಕೆಯೊಂದಿಗೆ,

ಹೊಸ ವರ್ಷದ ಹಾರ್ದಿಕ ಶುಭಾಶಯಗಳು!!

Tuesday, December 31, 2013

ಮರಳಿ ಬಾ ಮನ್ವಂತರವೇ ........


ಅಪಶಕುನದ ಹದಿಮೂರು ಮೂಡಿಸಿದ್ದು ಹದವಿರದ ಅಪಶ್ರುತಿ!! ಸೋತು ಗೆದ್ದವರು ಹಾಗು ಗೆದ್ದು ಸೋತವರ ಕಾಗಕ್ಕ ಗುಬ್ಬಕ್ಕ ಕಥೆಗಳೇ ಜಗತ್ತ್ತಿನೆಲ್ಲೆಡೆ ….!!

ಪರಿವರ್ತನದ ನಿರೀಕ್ಷೆಯಲ್ಲಿ ಕಳೆದ ಮಗದೊಂದು ವರುಷ. ಹಳ್ಳಕ್ಕೆ ಬಿದ್ದಾಗ ಆಳಿಗೊಂದು ಕಲ್ಲು  ಅನ್ನುವಂತೆ  ಜಗತ್ತಿನೆಲ್ಲೆಡೆ ಮುಖಭಂಗಕ್ಕಾದ ಅಮೇರಿಕಾ ಎನ್.ಎಸ್.ಎ  ಸಿದ್ದಾಂತ, ಅಳಿದುಹೋದ ಸಿರಿಯ… ಅಳಿದು ಉಳಿದ ಮಂಡೇಲಾ, ನಲುಗಿದ ಸುಡಾನ್, ತಮ್ಮ  ಇರುವನ್ನು ಮತ್ತೆ  ಮತ್ತೆ ಸಾರಿ ಆತಂಕ ಮಡುಗಟ್ಟಿಸಿದ ಭಯೋತ್ಪಾದನೆ, ಬದಲಾವಣೆ ಪರ್ವ ಕಂಡ ಭಾರತದ ರಾಜಕೀಯ ..... ಆಗಾಗ ಮುನಿದ ಪ್ರಕೃತಿ, ಉಳಿದಂತೆ ಮತ್ತದೇ ಬೇಸರ, ಅದೇ ಏರಿಳಿತದ ಹಗ್ಗ ಜಗ್ಗಾಟ, ಅದೇ ನಿಟ್ಟುಸುರಿನ ನಿನ್ನೆಗಳು, ಭರವಸೆಯ ನಾಳೆಗಳು.

“ಮರೆವೆಗೆ ಸಂದಿವೆ ಇಲ್ಲಿ ಹರುಷದ ಬಣ್ಣಗಳು”

ಉರುಳಿ ಅರಳಿದ ಗದ್ದುಗೆಗಳಲ್ಲಿ ಪವಡಿಸಿದ ಜನ ಸಾಮಾನ್ಯ…. ಕಳಚಿದ ಮುಗ್ದತೆಯಲ್ಲಿ ಮರೆತ ದೇಸೀಯತೆ … ಒಟ್ಟಿನಲ್ಲಿ ವರ್ಷಾಂತ್ಯದಲ್ಲಿ ಅಸ್ಥಿರತೆಯ ಅಂತ್ಯ.

“ನೀಡು ಬಾ ಮನ್ವಂತರವೇ ಭಾವಕೆ ಉಸಿರನ್ನು,ಬರಡು ಹೃದಯಗಳಿಗೆ ಜೀವದ ಹಸಿರನ್ನು…”






Saturday, July 6, 2013

ಅರಿವಿನ ಅರಿಕೆ........



ನನ್ನ ಪ್ರೀತಿಯ ವಿನು,
ಮತ್ತೆ ಅದೇ ಹೊಸತಿಲಲ್ಲಿ... ಅದೇ ಕೊಟೇಷನ್ ಜೊತೆ,     " ಕೆಟ್ಟ ಮೇಲೂ ಬುದ್ದಿ ಕಲಿಯದವರನ್ನು ಆವೀನ್ ಅನ್ನಬಹುದು.
 "ಮನಸಿಲ್ಲದ ಮನಸಿನಿಂದ ಮನಸುಮಾಡಿ ಮಧುರಮನಸಿಗೇ
ಮನಸುಕೊಟ್ಟು ಮನಸನ್ನೆ ಮರೆತು ಬಿಟ್ಟೆಯಾ, ಮನಸುಕೊಟ್ಟು ಮನಸೊಳಗೆ ಕುಳಿತು ಬಿಟ್ಟೆಯಾ"

ಒಪ್ಪುತ್ತೀನಿ.. ನಿನ್ನ ಮನಸ್ಸೂ ನನ್ನದರಂತೆ ಗೊಂದಲದ ಗೂಡಾಗಿದೆ. ಬಹುಮತವಿಲ್ಲದ ಅತಂತ್ರ ಸರ್ಕಾರದ ಸ್ಥಿತಿ ನನ್ನದು. ಸಾಕೆನಿಸುತ್ತದೆ, ಹತ್ತು ಪದಗಳ ಬದಲು ಒಂದು ಚಿತ್ರ. ನಿಜಕ್ಕೂ ನಾನು  ನಾನಾಗಿ ಉಳಿಯದ ಈ ಹೊತ್ತಿನಲ್ಲಿ ನನ್ನಲ್ಲಿ ಭಾವನೆಗಳ ತುಮುಲ. ಆತ್ಮಾವಹಳನೇಕೆ? ಅದರಿಂದ ನಿನಗೂ ಸುಖವಿಲ್ಲ... ನನ್ನ ಸುಖವಂತೂ ಮರೀಚಿಕೆ. ಇರುವುದನ್ನ ಇದೆಯೋ-ಇಲ್ಲವೋ ಎಂದು ಉತ್ತರಿಸಲು ನಾನು ಕೇಳಿದ್ದು ಭರ್ತಿ 1 ದಿನ. ಹೆಡ್ಡ! ಅನುಮಾನವೇ ಇಲ್ಲ. ಒಪ್ಪಿದೆ.. ನೀನು!!!

ಕಾಮನ್ ಸೆನ್ಸ್ ಮತ್ತೆ ನಾನು ಸವತಿಯರು. ಒಂದಾಗಿ ಬಾಳಿದ ಉದಾಹರಣೆ ನೂರರಲ್ಲಿ ಒಮ್ಮೆ. ವಯಸ್ಸು 30ತ್ತಾದರೂ ಹೇಳುವಲ್ಲಿ, ಸಂಭಾಳಿಸುವುದರಲ್ಲಿ 3ರ ಪೊರನ ಎಳಸುತನ. ನೀನು  ಕೇಳಬಹುದು,"ಯೋಚನಾ ಧಾಟಿ ಬೆಳೆಯುವ ಲಕ್ಷಣವಾದರೂ ಇದೆಯಾ?"... ಖಂಡಿತ, ನೀನೇ ಹೇಳಿದೆಯಲ್ಲ.. ಹದ ಮೀರಿದರೆ ವೀಣೆಯೂ ಅಪಶ್ರುತಿ ಮೂಡಿಸುತ್ತೆ... ಮನಸ್ಸು ಏನು ಮಹಾ?. ಕಳೆದುದನ್ನು ಹುಡುಕುವ-ಇರುವುದನ್ನು ಕಳೆಯುವ ಅರ್ಥವಿಲ್ಲದ ಆಲಾಪದಲ್ಲಿ ಅರ್ಥವಿಲ್ಲ. 

"ಪೂಜೆಗೆ ಹೂಗಳನು ಕಟ್ಟೋ ಕೈಗಳಿಗೆ ಗಂಧ ಸೋಕಿದರೆ ಜರಿವುದೆಂತೋ?" ನಿನ್ನದು ಎಂದಿನಂತೇ ಅರ್ಥಗರ್ಭಿತ ಪ್ರಶ್ನೆ. ನನ್ನದು ಅದೇ ಎಳಸು ಬಡಬಡಿಕೆಯಾದಲ್ಲಿ ನನ್ನಲ್ಲಿ ನಿನ್ನಿರುವು ಕನಸೆ. ಇಂದಾದರೂ ಎಚ್ಚೆರಿಕೆಯ ಹಾದಿಯಲ್ಲಿ ನನ್ನ ಅನಾವರಣವಾಗಲೇ ಬೇಕು. ನ್ಯಾಯದೇವತೆಯ ಸನ್ನಿಧಾನದ ಅರಿಕೆಯಲ್ಲೇ ನನ್ನ ಹರಕೆಯೂ ನಡೆಯಲಿ...

"ನಾನು ಹೇಳುವುದೆಲ್ಲವೂ ಸತ್ಯ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ".
ತಿಂದ ಒಂದೆರಡು ಹುಳಿಹಣ್ಣುಗಳ ದೆಸೆಯಿಂದ ಮಾರುಕಟ್ಟೆಯೇ ಹುಳಿಯೆಂದು ಹೊರವುಳಿದವನಿಗೆ ಅಪವಾದವೆಂಬಂತೆ ಕಂಡವಳು ನೀನು. ಬೀಳುವ ಪ್ರತಿ ಪೆಟ್ಟು ವಿಗ್ರಹವಾಗುವ ಬದಲು ನನ್ನನ್ನೇ ಮುರಿದುಹಾಕಿದ ಸಂದರ್ಭದ ಹಳಹಳಿ ಈಗ ಕಳೆದ ಸಂಗತಿ. ಕಳೆದ ಸಂಗತಿಗಳ ಹಪಹಪಿ ಬೇಡ... ಅಂತೆಯೇ ಭೂತದ ಹೊಣೆ ಹೊರದೆ ವರ್ತಮಾನದಲ್ಲಿ ನಾನು ನಿನ್ನಷ್ಟು ಪಾರದರ್ಶಕವಾಗಿ ಸಂಬಂಧಗಳ ವ್ಯಾಖ್ಯಾನಿಸಲಾರೆ. ನನ್ನ ಅಂತರ್ಮುಖತೆ,ಹಟ,ನನ್ನಲ್ಲಿ ನನಗೇ ಇರದ ನಂಬಿಕೆಯಿಂದ ಮೂಡಹೊರಟಿದ್ದು ನನ್ನ-ನಿನ್ನ ಸಂಬಂಧಗಳ ಮಹಾಪ್ರಸ್ಥಾನ. ಪ್ರತೀ ಬಾರಿ ನೀನು ಸೋತು ಗೆದ್ದೆ-ನಾನು ಗೆದ್ದು ಸೋತೆ. ಗೆದ್ದ ಸಂತೋಷ, ಸೋತ ದುಖ್ಹ ಎರಡೂ ನನ್ನಲ್ಲಿ ಉಳಿದಿಲ್ಲ.... ಕೇವಲ ನಾನು ನಾನಾಗಿದ್ದೇನೆ...ಇನ್ನಾದರೂ ಬದುಕುವ ಕಲೆ ಕಲಿಯುವ ಹಂಬಲವಿದೆ. ಮನಸ್ತಾಪ ಮನುಷ್ಯರಿಗೆ ಬರದೇ ಮರಕ್ಕಾ ಬರುತ್ತೆ. ನನಗೆ ವಿನಯ ಬೇಕು... ವಿನಯವಿಲ್ಲದೆ ಜಗವಿಲ್ಲ ಅಂದಮೇಲೆ ಆವೀನನೆಲ್ಲಿ?

ನನ್ನ ತೊಳಲಾಟ ಬಯಲಲ್ಲಿ ಇಟ್ಟ ಹಣತೆ. ಆರುವುದು ಶತಸ್ಸಿದ್ದ.. ಹಿಡಿಯಬಹುದು ಕೊಂಚ ಕಾಲ.  ನಾವು ನಾವಾಗಿರೋಣ ವಿನು... ಇಷ್ಟ-ಕಷ್ಟಗಳ ಗಿಜ್ಞಾಸೆ ಇಷ್ಟೆಲ್ಲಾ ಕುರುಕ್ಷೇತ್ರಕ್ಕೆ ಕಾರಣ. ಫಾರ್ಮ್ಯಾಲಿಟಿನಮ್ಮ ನಡುವೆ ಬಯಸದೆ ಸುಳಿದ ಮುಂದೆಂದೂ ಸುಳಿಯಬಾರದ ಪದ. ಆ  ನಿಟ್ಟಿನಲ್ಲಿ ನನ್ನ ಪ್ರಯತ್ನ ಅವಿರತ. ಮತ್ತೊಮ್ಮೆ ಕೇಳುತ್ತಿದ್ದೇನೆ ವಿನು....  ನೀನು ನನ್ನವಳಾಗಿರುತ್ತೀಯ? ನನ್ನ ಅರ್ಥವಿಲ್ಲದ ಹತಾಶೆ/ಜಿಗುಟುತನವನ್ನ ಮೀರಿ ನಿನ್ನವನಾಗಿರುವ ಹೊಣೆ ನನ್ನದು. ನನ್ನ ಹೊಣೆಗಾರಿಕೆಯ ಶಿಲುಬೆಯನ್ನ ನಾನು ಹೊರುತ್ತೇನೆ.


ನನ್ನ ದಾರಿಯ ನಾನೇ ನೋಡಿ ಹಿಡಿದೆನು ಇನ್ನು
ಕೈ ಹಿಡಿದು ನಡೆಸು ನೀನು
ಮಿರುಗು ಬಣ್ಣಕೆ ಬೆರೆತು ಭಯಮರೆತು ಕೊಬ್ಬಿದೆನು
ಮೆರೆದಾಯ್ತು ನೆನೆಯದಿರು ಹಿಂದಿನದೆಲ್ಲ.

ಇಷ್ಟುದಿನ ಸಲಹಿರುವೆ ಮೂರ್ಖನನು ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ.....

ನಿನ್ನ
ಅವಿ.

Sunday, January 13, 2013

ಸಂಕ್ರಮಣದ ಸಂಕ್ರಾಂತಿಯ ಶುಭಾಶಯಗಳೊಂದಿಗೆ...!!!

ಹಗಲಿನ ಹಬ್ಬದ ಜಾತ್ರೆಯು ಮುಗಿಯಿತು
ರವಿ ಸಂದನು ಪಡುವಣ ಗುಡಿಗೆ
ಕತ್ತಲ ಕಣಿವೆಯೊಳುರುಳುತ ನರಳುವ
ಬೆಳಕಿನ ತೊರೆಯೊಲು ಸಂಜೆಯಿರೆ
ಭೀತಿಯ ಭೂತವು ಜಡೆಯ ಬಿಚ್ಚಿದೊಲು
ಹಿರಿಯಾಲದ ಮರ ನಿಂತಿರಲು
ಕೊಂಬೆ ಕೊಂಬೆಯಲಿ ದುರ್ಮಂತ್ರದವೊಲು
ಎನಿತೋ ಬಾವಲಿ ಜೋತಿರಲು
ಮನ ಬೆದರಿತು ಆ ನೋಟವ ನೋಡಿ
ಜಗವನೆ ಮುಸುಕಿರೆ ಕತ್ತಲ ಮೋಡಿ !
 
 
ಚಣ ಯುಗವಾಯಿತು, ಮನ ಹಾರೈಸಿತು
ಬೆಳಕಿನ ಕುಡಿಯೊಂದನು ಬಯಸಿ
ನಿರಾಶೆಯಾಗಸದಾಸೆಯ ಕಿಡಿಗಳೊ
ಎಂಬೊಲು ತಾರೆಗೆ ಕಣ್ ಸುಳಿಸಿ
ಮಿನುಗಲು, ಕತ್ತಲ ಕೊಳದಿಂದರಳಿತೊ
ಬೆಳಕಿನ ಹೂವೊಂದೆಂಬವೊಲು,
ತಿಂಗಳು ಮೂಡಿತು ಬೆಳಕನು ಸುರಿಸಿತು
ಜಗವೇ ಅಚ್ಚರಿಗೊಂಬವೊಲು
ಕತ್ತಲು ಕರಗಿತು ಬೆಳಕಿನೊಳಿಳಿದು
ಬೆಳಕೊಂದೇ ಹಬ್ಬಿತು ಬೆಳೆ ಬೆಳೆದು.
 
ಬೆಳಕಿನ ಹೂವಿನ ಬಂಡನು ಆಶಿಸಿ
ಹೊರಟವೊ ಕತ್ತಲ ದುಂಬಿಗಳು
ತೇಲುವ ಅಮೃತದ ಕುಂಭದ ಬಯಕೆಗೆ
ದಾನವರೆಸೆದಾ ಬಾಣಗಳೊ
ಎಂಬೊಲು, ಒಂದೊಂದೇ ಬಾವಲಿಗಳು
ಮರದಿಂದಾ ಚಂದ್ರನ ಕಡೆಗೆ
ಹಾರುತ ಹಾರುತ ಕಡೆಗೊಂದಾದುವು
ತಿಂಗಳ ಬೆಳಕಿನ ಕೃಪೆಯೊಳಗೆ
ಬೆರಗಾದುದು ಮನ ದೃಶ್ಯದ ಪರಿಗೆ
ಅನಿರೀಕ್ಷಿತ ಸಂಕ್ರಾಂತಿಯ ಕೃಪೆಗೆ !
 
                                    ಲೇಖಕರು:

Tuesday, January 1, 2013

ಭರವಸೆಯ ಉಷೆ!!!


ಕಳೆದ ವರುಷದ ನೆನಪುಗಳ ಜರಡಿಯಲ್ಲಿ ನನ್ನದೂಂತ ದಕ್ಕಿದ್ದು ಕೇವಲ, "ಭರವಸೆಯ ನಾಳೆಗಳು".
ರಾಜಕೀಯ ಚದುರಂಗದಲ್ಲಿ ಹೂಂಕರಿಸಿ ಮಲಗಿದ ಯುವಜನತೆ, ಸೋತು ಗೆದ್ದ ಪ್ರಪಂಚದ ಜನಜನಾರ್ಧನ(ಜರಾಸಂಧ)ರು, ಎಂದಿನಂತೆ ಮುನಿದ ಪ್ರಕೃತಿ, ಇರುವ ನೀರು ಮಜ್ಜಿಗೆ ಭೂಮಿಗಾಗಿ ನಾನು-ತಾನು  ಎಂದು ರಚ್ಚೆ ಹಿಡಿದ ಭವಿಷ್ಯದ ನಾಯಕರು, ವಾಸ್ತವತೆಗೆ ಕವಿದ, ಢೋಂಗಿ ಬಾಬಾಗಳ ಜೋಳಿಗೆ ತುಂಬಿಸಿದ "ಪ್ರಳಯ..ಪ್ರಳಯ.... ಪ್ರಳಯ....".

ಅರ್ಥವ್ಯರ್ಥಗಳ ಜಿಜ್ಞಾಸೆ  "ದಿ ಪರ್ಫೆಕ್ಟ್ ಸೃಷ್ಟಿಕರ್ತನಿಗಿರಲಿ". ಇನ್ನಾದರೂ ಹೃದಯದ ಬಾಗಿಲಿಗೆ ಜಡಿದ ಬೀಗದ ಮೇಲಿನ ಸಲ್ಲದ ಜಗಳದಲ್ಲಿ ನಾಕವನ್ನು ನರಕಮಾಡುವ ಹುಚ್ಚು ಪ್ರತಿಷ್ಠೆಗಿಂತ, ಹೃದಯಗಳ ನಡುವಿನ ಗಡಿರೇಖೆಗೊಂದು ಟಾಂಗು ಕೊಟ್ಟು ಕಳೆದ ಬೀಗದ ಕೀಲಿ ಹುಡುಕುವಲ್ಲಿ ಮಗ್ನರಾಗೋಣ....

ಪೂರ್ವಜರ ರಕ್ತದೋಕುಳಿ ಕೆಂಪಲ್ಲಿ ನಮ್ಮ ಸುಖದಂತೆ
ನಮ್ಮದರಲ್ಲಿ ನಮ್ಮವರದಾಗದಂತೆ ತಡೆಯುವ ಸಾಮೂಹಿಕ ಹೊಣೆಯ ಶಿಲುಬೆ ಇನ್ನಾದರೂ ಹೊರೋಣ...

"ಬದಲಾವಣೆಯ ಭರವಸೆಯಲ್ಲಿ..... ಹೊಸವರುಷದ ಶುಭಾಶಯಗಳು.

Friday, October 19, 2012

ಮಥುರಾ ನಗರಪತಿ ಗೋಕುಲದ ಉತ್ಕಟತೆ ಏಕೆ?


ಪ್ರೀತಿ ಹಾಗೂ ವಿರಹದ ಉತ್ಕಟೆಗೆ ಮತ್ತೊಂದು ಹೆಸರೇ ಕೃಷ್ಣ ಮತ್ತು ರಾಧೆ. ಯಮುನಾ ತಟದಲ್ಲಿ ವಿಹಾರಿಸುವಾಗಲೂ, ವಿರಹದಿ ವಿರಮಿಸುವಾಗಲೂ ಒಬ್ಬರು ಮತ್ತೊಬ್ಬರ ನೆನಪಲ್ಲಿ ವಿಲೀನ...ತಮ್ಮ ಇರುವಿಕೆಯನ್ನೇ ಮರೆತ  ತನ್ಮಯತೆ. ಹದ ತಪ್ಪಿದ್ದಾದರೂ ಎಲ್ಲಿ? ಜಗತ್ತನ್ನೇ ಗೆಲ್ಲುವ ಛಲವಿದ್ದ ಕೃಷ್ಣನಿಗೆ ತನ್ನ ರಾಧೆಯನ್ನು ದಕ್ಕಿಸಿಕೊಳ್ಳಲಾಗಲಿಲ್ಲ. ಸಮಾಜದ ಕಟ್ಟುಪಾಡುಗಳನ್ನ ಮೀರಿ ಕೃಷ್ಣನನ್ನು ಗಂಡನಂತೆ ಕಂಡ ರಾಧೆಗೆ ಅದೇ ಸಮಾಜದ ಎದುರಿನಲ್ಲೇ ಛಲದಂಕಮಲ್ಲನೊಡನೆ ಬಾಳುವೆ ಮಾಡಲಾಗಲಿಲ್ಲ....

 ಕಟ್ಟುಪಾಡುಗಳ ಸಂತೆ ಭಾರತೀಯ ಸಂಸ್ಕೃತಿಯಲ್ಲಿ ದಾಂಪತ್ಯದಾಚೆಗೂ ಸಂಬಂಧಗಳ ಒಪ್ಪಿಗೆ ಸಮಸ್ತರಿಂದಲೂ ಸಿಕ್ಕಿದ್ದೇ ಇದ್ದಲ್ಲಿ ಅದು ರಾಧಾ ಕೃಷ್ಣರಿಗೆ ಮಾತ್ರ.  ಆಸ್ತಿಕರು ದೈವಕೃಪೆ, ದೇವಲೀಲೆ ಹಾಗೆ ಹೀಗೆ ಏನೇನು ಹೇಳಿದರೂ ಇವರ ಪ್ರೀತಿ ಕೊಂಚ ಮರ್ಯಾದೆಯ ಚೌಕಟ್ಟಿನ ಹೊರಗೇ...   ಸೂಜೆ ಮೊನೆಯಷ್ಟು ಭೂಮಿಗಾಗಿ ಅಣ್ಣ -ತಮ್ಮರೇ ಕೊಲ್ಲಾಡುವಂತಹ ಜನಮಾನಸದಿಂದಲೂ ಇವರೀರ್ವರ  ಪ್ರೀತಿಗೆ ಮನ್ನಣೆ. ಆದರಣೆ.

ತನುಮನದಲ್ಲೂ ರಾಮನವಳಾಗಿದ್ದ ಸೀತೆ, ಛದ್ಮವೇಷಧಾರಿಯೊಡನೆ ಗಂಡನೊಡನಾಡುವ ಸಲುಗೆಯಿಂದಲೇ ಮಿಲನಗೈದ ಅಹಲ್ಯೆ, ಮಂಡೋದರಿ, ಜಗವಾಳುವ ಪಂಚವೀರ್ಯವಂತರಿಂದ ಮಕ್ಕಳು ಪಡೆದರೂ ಜೀವನಪೂರ್ತಿ ವೈಧವ್ಯದಲ್ಲೇ ಕಾಲಕಳೆದ ಕುಂತಿಯರಿಗೆ ಕಾಡಿದ ಧರ್ಮದ ಕಟ್ಟಳೆ ರಾಧೆಗೆ ಅಂಕುಶವಾಗಲಿಲ್ಲ.... ರಾಧೆಗೆ ಸಿಕ್ಕ ಈ ಬೌದ್ಧಿಕ ಸ್ವಾತಂತ್ರ್ಯ ಪಂಚ ಪತಿವ್ರತೆಯರಾರಿಗೂ ದೊರಕದಿರುವುದು ನಿಜಕ್ಕೂ ವಿಪರ್ಯಾಸ.  ಈ ಸ್ವಾತಂತ್ರ್ಯದಲ್ಲೇ ಕಾಯುತ್ತಾ ನಿಂತ ರಾಧೆ... ಮೇಘರಾಜನ ವರ್ಷಧಾರೆಗೆ ನಿಲುಕಿಸುತ್ತಿರುವ ಧರಣಿಯಂತೆ.


" ಏರುನದಿಗೆ ಇದಿರಾಗಿ ಈಜಿ ದಡಸೇರಬಹುದೇ ಜೀವ ದಾಟಿ ಈ ಪ್ರವಾಹ"... ಪ್ರೀತಿಯೂ ಅಂತೆ ಕಂತೆ. ಸರ್ವವೂ ಪ್ರೀತಿಯಲ್ಲಿ ಸಹ್ಯ.
       
" ನಿನ್ನನಗಲಿದ ಕ್ಷಣದ ನಿನ್ನವಳ ಕಣ್ಣಂಚಿನ ಹನಿ ಒಣಗಿ ಕಾಲ ಸರಿದಾಗಿದೆ
ನಿನ್ನ ಪ್ರೀತಿ ಈಗ ತುಂಬು ಗೃಹಿಣಿ
ಈಗಲೂ  ಏಕೆ ಗೋಕುಲಕ್ಕೆ ಹೋಗುವ ತವಕ ಓ ಮಥುರಾನಗರಪತಿ"

ಮಲಗಿದ್ದವ ಬೆಚ್ಚಿ ಎದ್ದೆ. ಕಣ್ಣಗಲಿಸಿ ಹುಡುಕಾಡಿದೆ.... ಯಾಕೋ ಕೃಷ್ಣನ ಭಾರದ ಹೆಜ್ಜೆಗಳು ಸನಿಹದಲ್ಲೇ ಓಡಿದಂತಾಯಿತು.

ಹೆಚ್ ಎಸ್ ವಿಯವರ ಪ್ರೀತಿಯುಟ್ಕತೆಯ "ತೂಗುಮಂಚದಲ್ಲಿ ಕೂತು",ರೈನ್ ಕೋಟ್ ಚಿತ್ರದ " ಮಥುರಾ ನಗರಪತಿ" ಹಾಡುಗಳು ನನ್ನನ್ನು ಸಮಯದ ದಿವಾಳಿತನದಂಚಿಗೆ ನಿಲ್ಲಿಸಿವೆ. ಅದಕ್ಕೆ ಖುಷಿಯಿದೆ.....ಅಂತಹ ಪ್ರೀತಿಯ ಪಾಲು ನನಗಿಲ್ಲ; ಅಷ್ಟೇ ದುಖ್ಖವೂ ಇದೆ.

ನಿಮ್ಮ
ಅವಿ

Saturday, October 6, 2012

ಕಾವೇರಿ.. T20, ಕೂಲಿಂಗ್ ಗ್ಲಾಸ್ ಹಾಗೂ 90

ನಮ್ಮ ಜನಗಳ ಕಳಕಳಿ ಒಪ್ಪುವಂತಹುದೇ... ರಾಲಿ ಕೂಗಿ, ಕೂಲಿಂಗ್ ಗ್ಲಾಸ್ ಕಣ್ಣಲ್ಲಿ ಕಿಡಿಕಾರಿ, ಧಿಕ್ಕಾರ ಕೂಗಿ, 2 ಹೊತ್ತು ಉಪವಾಸ ಕೂತು ಸಂಜೆ ಮನೆಗೆ ಹಿಂತುರಿಗಿ ಟಿ20 ಮ್ಯಾಚ್ ನೋಡುವ ಪ್ರತಿಭಟನೆಗಳು ಯಾರ ಮೇಲೆ ಒತ್ತಡ ತರುತ್ತವೆ ನಿಜಕ್ಕೂ ತಿಳಿಯುತ್ತಿಲ್ಲ....

ದಿನದಿಂದ ದಿನಕ್ಕೆ ಪ್ರತಿಭಟನೆ ತೀವ್ರಗೊಳ್ಳುತ್ತಲೇ ಇದೆ... ರಸ್ತೆ ಬದಿಗಳಲ್ಲಿ, ಪ್ರಮುಖ ಸರ್ಕಲ್ ಗಳಲ್ಲಿ...

ಜನಸಾಮಾನ್ಯ ಓಡಾಡುವ ಸಾರ್ವಜನಿಕ ವಾಹನಗಳ ಹೆದ್ದಾರಿಗಳನ್ನು ಬಂಧ್ ಮಾಡಿ, ಪರೀಕ್ಷೆ ಸಮಯದಲ್ಲಿ ಶಾಲಾ ಕಾಲೇಜುಗಳ ವೇಳಾಪಟ್ಟಿ ಹಿಂದೂ-ಮುಂದುಮಾಡಿ ಸರ್ಕಾರಕ್ಕೆ ಒತ್ತಡ ತರುತ್ತೇವೆ ಅನ್ನುವ ಭ್ರಮೆ ಅರಿಯದ ದಾರಿ ತಿಳಿಯದ ಅನ್ನದಾತನಿಗಿರಬಹುದು..... ತಿಳಿದ ಬುದ್ದಿಜೀವಿಗಳಿಗೆಕಿಲ್ಲ?

ಕೆ‌ ಆರ್ ಎಸ್ ನಿಂದ ನಿನ್ನೆ ರಾತ್ರೋ  ರಾತ್ರಿ ಮತ್ತೆ 4 ಹೊಸ ಕ್ರಿಸ್ಟ್ ಗೇಟ್ ಓಪೆನ್ ಮಾಡಿದ್ದಾರೆ... ನೀರು ಧಾರಾಕಾರ ಹರಿದು ಹೋಗುತ್ತಿದೆ....ತಡೆಯಬೇಕಾದ ನಮ್ಮ ಜನ ಆಳುವವರ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಸರ್ಕಲ್ ,ಹಾದಿ ಬೀದಿಗಳಲ್ಲಿ ಬ್ಯುಸಿಯೋ ಬ್ಯುಸಿ.

ಏಕೆ ಹೀಗೆ? ನಿಜಕ್ಕೂ ಅಷ್ಟು ಕಳಕಳಿ ಇರುವವರು ವಿಧಾನ ಸೌಧದ ಮುಂದೇಕೆ ಧರಣಿ ಕೂರೊಲ್ಲ? ಮುಖ್ಯಮಂತ್ರಿಗಳ/ಆಳುವ ಬಾಬುಗಳ ಮನೆಗೇಕೆ ಘೇರಾವು ಹಾಕುವುದಿಲ್ಲ? ಪ್ರಾಣ ಕೊಟ್ಟೆವು .. ಹನಿ ನೀರು ಬಿಡೆವು ಎಂದು ಗಂಟಲು ಹರಿಯುವಂತೆ ಕಾಣದ ಟೌನ್ ಹಾಲ್, ಪ್ಯಾಲೇಸ್ ಗ್ರೌಂಡ್ , ಬಸವನಗುಡಿ ಮೈದಾನದಲ್ಲಿ ಕಿರುಚುವ ಬದಲು ಆಳುವವರ ಕಿವಿ ಸನಿಹದಲ್ಲೇಕೆ ನಿಮ್ಮ ದನಿಮೂಡಿಸುವುದಿಲ್ಲ?  ಹಳ್ಳಿಯಲ್ಲಿ ಪಂಚಾಯ್ತಿ ಹಂತದಲ್ಲಿ, ತಾಲೂಕಿನಲ್ಲಿ ತಹಸೀಲ್ದಾರರ ಹಂತದಲ್ಲಿ, ಜಿಲ್ಲಾವಾರಿನಲ್ಲಿ ಜಿಲ್ಲಾಧಿಕಾರಿಗಳ ಹಂತದಲ್ಲೇಕೆ, ಅವರ ಮನೆ, ಆಫೀಸುಗಳ ಮುಂದೇಕೆ ಸರದಿ ಪ್ರಕಾರ 24/7 ಧರಣಿಗಳು ಮೂಡುವುದಿಲ್ಲ?

ಪ್ರತಿಭಟನೆಯ ದನಿಗೆ ಅಡ್ಡ ನಿಲ್ಲುವ ಪೊಲೀಸರೂ ಕೂಡ ಅದೇ ಕಾವೇರಿಯ ಮಕ್ಕಳೇ.... ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ಕಾರ್ಯವೈಖರಿಯನ್ನು ವಿಮರ್ಶೆ ಮಾಡಲು ಒಂದು ಕರೆ ಕೊಟ್ಟ ಒಬ್ಬ ಜನ ಪ್ರತಿನಿಧಿಯನ್ನೂ ಕಾಣೆ!!... ಅಮರಣ ಉಪವಾಸ ಮಾಡುವ so called ಜಲಾಭಿಮಾನಿಗಳು ವಿಧಾನ ಸೌಧದ ಮುಂದೆ ಮಾಡಿ.... ಉಚ್ಚಿ ಮಾಡಿದ್ದಕ್ಕೆ, ಹೊಡೆದಿದ್ದಕ್ಕೆ, ಬೈದಿದ್ದಕ್ಕೆ ಅಳುತ್ತಾ ಹೈಕಮಾಂಡ್ ಎದುರು ಕಿರುಲಾಡುವ ರಾಜ್ಯ ಕಾಂಗ್ರೆಸ್ಸ್ ನಾಯಕರು ಅವರದೇ ಹೈಕಮಾಂಡ್ ಮಾಡಿರುವ ಈ ಇಬ್ಬಂದಿತನಕ್ಕೆ ತಿರುಗಿ ಗಂಟುಬೀಳುವಂತೆ ಅವರ ದೈನಂದಿನ ಜೀವನವನ್ನು ಹಾಳವುಗೆಡವಿ!! ಆಳುವ ಚುವಾಯಿತ ಪ್ರತಿನಿಧಿಗಳ ದೈನಂದಿನ ಜೀವನ ನರಕ ಮಾಡಿ...

ಅದು ಒಪ್ಪುವ ಮಾತು... ಜನ ಸಾಮಾನ್ಯನದಲ್ಲ

ಕಾನೂನು ಸಮರದಲ್ಲಿ ಪ್ರತೀ ಬಾರಿಯೂ ಕನ್ನಡಿಗರ ಹದ ತಪ್ಪುತ್ತಿದೆ ಎಂದಾದಲ್ಲಿ ಒಂದೋ ನಮ್ಮ ಬೇಡಿಕೆಯಲ್ಲೇ ತಪ್ಪಿದೆ.. ಇಲ್ಲವಾದಲ್ಲಿ ನಮ್ಮ ವಿಚಾರಮಂಡನೆ ಸರಿಯಿಲ್ಲ ಎಂದರ್ಥ... ಮೊದಲನೆಯದು "ಖಡಾಖಂಡಿತ ಆಗದ ಮಾತು" ಅನ್ನುವುದೇ ನಮ್ಮ-ನಿಮ್ಮಲ್ಲರ ಒಕ್ಕೊರಳಿನ ಮಾತು. ಅಂತಾದಲ್ಲಿ ನಮ್ಮ ವಾದದಲ್ಲಿ ಹುರುಳಿಲ್ಲ. ದಶಕಗಳಿಂದಲೂ ನ್ಯಾಯಾಲಯಕ್ಕೆ ನಮ್ಮ ಬೇಡಿಕೆ ಮನವರಿಕೆ ಮಾಡಲು ನಾವು ಸೋಲುತ್ತಿದ್ದೇವೆ ಎಂದಾದಲ್ಲಿ ಸೈದ್ದಾಂತಿಕ ನಿಲುವಿನ ಪ್ರತಿಪಾದನೆಗಾಗಿ ಅರ್ಹ ವಕೀಲರನ್ನ ನೇಮಿಸುವ, ನಮ್ಮ ವಾದ ಪುಷ್ಟೀಕರಿಸಲು ಬೇಕಾದ ಹತ್ತು ಹಲವು ಸಾಕ್ಷ್ಯ-ಸಂದರ್ಭಗಳನ್ನ ಒದಗಿಸುವ ಗುರುತರ ಜವಾಬ್ದಾರಿಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವ ಬದಲು ನವೆಂಬರ್ ಕನ್ನಡಾಭಿಮಾನದಂತೆ, ಚಳಿಗಾಲದ ಕಾವೇರಿ ಚಳುವಳಿ ಪ್ರತೀ ವರ್ಷ ಪುನರಪಿ ಜನನಂ: ಪುನರಪಿ ಮರಣಂ  ತರಹ ಜೀವಂತವಿಡುವಲ್ಲಿ  ಏಕೆ ಇಷ್ಟು ಕಾತರರಾಗಿದ್ದೇವೆ?

ಕೇಂದ್ರ ಸರ್ಕಾರ 1 ಕಲ್ಲಿಗೆ ಎರಡು ಹಕ್ಕಿ ಹೊಡೆದಿದೆ.  ತಮಿಳುನಾಡಿಗೆ ಬಂಪರ್, ಕರ್ನಾಟಕ ಬಿ ಜೆ ಪಿಗೆ ಷಾಕ್. ನಾವು ಬಿ ಜೆ ಪಿ ದೂರುತ್ತಿದ್ದೇವೆ... ಅವರು ಕುರ್ಚಿ ರೇಸಿನಲ್ಲಿ ಬ್ಯುಸಿ....  ಇನ್ನೂ ಕಾಂಗ್ರೆಸ್, ದಳಕ್ಕೆ  ಸಿಕ್ಕಿದ್ದೇ  ಛಾನ್ಸ್ ಎಂದು ನಮ್ಮ ಬೀದಿ ಬವಣೆಗೆ ಐಷಾರಾಮಿ ಕಾರಿನಲ್ಲಿ ಬಂದು ಸಾಥ್/ಪೊಸು ಕೊಡುತ್ತಿದ್ದಾರೆ.

ಉರಿಯುತ್ತಿರುವ ಮನೆಯಲ್ಲಿ ಸಿಗರೇಟು ಹಚ್ಚಿಕೊಳ್ಳುವ ಮನೋಭಾವದವರು ನಮ್ಮ ಹೀನಲಾಡಿ ರಾಜಕಾರಣಿಗಳು. ಹರಿಯುವ ನೀರು ಹರಿದಷ್ಟೂ ಹೋಗಲಿ... ಜನ ಕಚ ಪೀಚ ಕಿರುಲಾಡಿ ಒಂದು ಹಂತಕ್ಕೆ ಬರುವಷ್ಟರಲ್ಲಿ ನೀರು ಹೋಗಿರುತ್ತದೆ... ಆಗ, "ನೋಡ್ರಪ್ಪ ನೀವು ಹೇಳಿದಂತೆ ನೀರನ್ನು ಬಿಡುತ್ತಿಲ್ಲ.. ಸಮಾಧಾನ ತಾನೇ?" ಅನ್ನುವ ಧಾಟಿಯಲ್ಲಿ ಆಳುವ ವರ್ಗ ವ್ಯಂಗ್ಯನಗೆ ಬೀರುತ್ತದೆ... ಖುಷಿಯಲ್ಲಿ ಟಿ20, 90 ಹೊಡೆದು ಮಲಗಿ ಮುಂದಿನ ಕಾವೇರಿ ಗಲಭೆಯಲ್ಲಿ ಎಚ್ಚೆತ್ತು ಮತ್ತೆ ಹೀಗೇ ಆಲಾಪನೆ ಶುರುಮಾಡುವ ಬದಲು ಇಂದೇ ಎಚ್ಕೆಟ್ಟುಕೊಳ್ಳೋಣ....ನಿಮಗೆ ಅಷ್ಟು ಕಿಚ್ಚೇ ಇದ್ದಲ್ಲಿ Paralyze the Administrative system ....!!  ಕಬ್ಬಿಣ ಕಾಯುವ ಮೊದಲೇ ತಟ್ಟುವ ಹುಚ್ಚು ಸಾಹಸದಲ್ಲಿ ನಮ್ಮ ಕೈಯೇ ನೋಯುವುದು..ಇನ್ನಾದರೂ ಪ್ರತಿಭಟನೆಯ ಸ್ಥಳ, ಕಾರ್ಯವೈಖರಿ ವೈಜ್ಞಾನಿಕತೆಯಿಂದ ಕೂಡಿರಲಿ.... ಅಷ್ಟರಲ್ಲಿ ನಮ್ಮ ಕಾವೇರಿಯ ನೀರು ನಿಮ್ಮಿಂದ ಬಿಟ್ಟು ಹೋಗದಿರುತ್ತದೆ ಎಂಬ ಭರವಸೆಯಲ್ಲಿ

Tuesday, October 2, 2012

"ಕಣ್ಮರೆಯಾದ ಭಾರತದ ಭವಿಷ್ಯ"

"ಜೈ ಜವಾನ್ ಜೈ ಕಿಸಾನ್" ಘೋಷಣೆಯೊಂದಿಗೆ ವಿಶ್ವದ ರಾಜಕೀಯಕ್ಕೆ ಮಾದರಿಯಾಗಿದ್ದ "ಶಾಸ್ತ್ರೀಜಿಯವರ ಜನುಮದಿನ ಇಂದು. ಗಾಂಧಿ-ನೆಹರು ಅಲೆಯ ಈ ಘಳಿಗೆಯಲ್ಲಿ ಮರೆತುಹೋದ ಅಪ್ಪಟ ಗಾಂಧೀವಾದಿಯ ಜಯಂತಿ.

"We miss you Shastriji"

Wednesday, September 19, 2012

ಓದಲೇ ಬೇಕಾದ ಇಂದಿನ ಪುಸ್ತಕಗಳು"

"ವಿಜಯನಗರ ಹಾದಿ ಬೀದಿಯಲ್ಲಿ ಮಾರುತ್ತಿದ್ದ ಮುತ್ತು ರತ್ನ ನಂತರದಲ್ಲಿ ಎಲ್ಲಿಗೆ ಹೊದ್ವು?
  "ಸಿದ್ದಾರ್ಥ ನಡುರಾತ್ರಿ  ಕದ್ದೋಡಿ ಬುದ್ದನಾದಾಗ ಯಶೋಧರೆ ಮಗನೊಡನೆ ಹೆಣಗಿದ ಮನಸ್ಥಿತಿ ಹೇಗಿತ್ತು?"
     "ಅಜಂತಾ ಗುಹೆಗಳಲ್ಲೇ ಕಲ್ಲಿನಲ್ಲೇಕೆ ಕಲೆಯರಳಿಸುವ ಹುಚ್ಚು ಪ್ರಯತ್ನಕ್ಕೆ ಬೋಡು ತಲೆಯ ಬೌದ್ದರು ಪ್ರಯತ್ನಪಟ್ಟರು?"
      "ಮಾಲಂಗಿ ಮಡುವಾಗಲಿ ಎಂದು ಶಾಪಕೊಟ್ಟು ಇದ್ದ ಮಡುವಿಗೇ ಬಿದ್ದ ಅಲಮೇಲಮ್ಮನ ಶಾಪಕ್ಕೆ  ಸಿಕ್ಕ ಸಾರ್ಥಕತೆ ಏನು?
       "ಪಟ್ಟದ ರಾಣಿ ಶಾಂತಲೆ ಬೇಲೂರು ಶಿಲ್ಪಕಲೆಗಾಗಿ ಶಿಲ್ಪಿಗಳ ಎದುರಿನಲ್ಲೇ ಆ ಪರಿ ಸೊಬಗಿನಲ್ಲಿ ಕಾಣಿಸಿಕೊಳ್ಳಬೇಕಾದ ಅನಿವಾರ್ಯತೆ ಏನಿತ್ತು?"
"ಸಾರನಾಥದ ಅಶೋಕ ಸ್ಥಂಬದಲ್ಲಿ ಸಿಂಹಗಳಂತೂ ಇದ್ದವು.. ಆದರೆ ಒಂದು ಹೆಣ್ಣಿನ ಆಕ್ರೋಶಕ್ಕೆ ಬಲಿಯಾದವು". 


ಬಹಳ ವರ್ಷಗಳಿಂದ ನನ್ನೊಳಗೇ ತೊಳಲಾಡುತ್ತಿದ್ದ ಹಲವು ಪ್ರಶ್ನೆಗಳಿಗೆ ಇಂದು ಉತ್ತರ ಸಿಕ್ಕಿದೆ. "ಇದ ಮಿತ್ತಂ"   ಅನ್ನುವಂತಿಲ್ಲದಿದ್ದರೂ ಮನಸ್ಸಿನ ಬಿರುಗಾಳಿ ಶಾಂತವಾಗುವಷ್ಟು.  ನಿಮಗೂ ಹಲವುಬಾರಿ ಮನಸ್ಸಿನಲ್ಲಿ ಈ ಪ್ರಶ್ನೆ ಖಂಡಿತಾ ಮೂಡಿರುತ್ತದೆ. ಉತ್ತರ ಬೇಕಾದಲ್ಲಿ ಓದಿ ಕನ್ನಡದ "ಡಾವಿಂಚಿ ಕೋಡ್ "  ಎಂದೇ ಪ್ರಖ್ಯಾತವಿರುವ  ಕೆ.ಎನ್.ಗಣೇಶಯ್ಯನವರ 

       


"ಭಾವನೆಗಳ ಎರಕ ನಮ್ಮ ಗಣಪ"

ಆಸ್ತಿಕರ ಅನನ್ಯ ಆಸ್ತಿ, ನಾಸ್ತಿಕರ ನಿರಾಕರಣದ ಮುಕುಟ "ಗಣು ಮಾಮನ" ಹಬ್ಬ ಮತ್ತೊಮ್ಮೆ ಜನಮಾನಸದ ಮನದಂಗಳದಲ್ಲಿ. "Blasphemy"ಹೆಸರಿನಲ್ಲಿ ಜಗತ್ತೆಲ್ಲಾ ಹೊತ್ತಿ ಉರಿಯುತ್ತಿರುವ ವೇಳೆಯಲ್ಲಿ ಭಾವನೆಗಳ ಎರಕದಲ್ಲಿ ಮಿಂದೆದ್ದ ಗಣಪ. 

  

ಮತ್ತೆಂದೂ ಮಹಾಭಾರತದ Sequels ಆಗಲಿ Prequels  ಆಗಲಿ ಬರೆಯನೆಂದು ವೇದವ್ಯಾಸರಿಗೆ ಸೆಡ್ಡು ಹೊಡೆದು ಕೆರಳಿದ ಸಿಂಹದಂತಿರುವ ಮಕ್ಕಳ ಗಣು ಮಾಮ, ಯುವಕರ "ಗಣೇಶ ಬಪ್ಪ ಮೊರಯಾ", ಹಿರಿಯರ ಗಣೇಶಪ್ಪ ಇಂದಿನಿಂದ ದಿನಗಳ ಲೆಕ್ಕದಲ್ಲಿ ನಮ್ಮೊಡನೆ ನಮ್ಮವನಾಗಿ ನಮ್ಮ ಅನುಕೂಲಕ್ಕೆ ತಕ್ಕಂತೆ ತೃಪ್ತನಾಗಿ ಹರಸುವ ಸುವರ್ಣಕಾಲ.
ದೇವರ ಹೆಸರಿನಲ್ಲಿ ಹೃದಯದ ಬಾಗಿಲಿಗೆ ಬೀಗಗಳನ್ನು ಬಡಿದು ಪರಸ್ಪರ ಯುದ್ದ ಸಾರಿರುವ ಮನುಕುಲಕ್ಕೆ ಗಣು ಮಾಮ ಸೌಹಾರ್ದತೆಯ ನೈತಿಕ ಪಾಠ ಹೇಳುವ ಸಮಯ ಬಂದಿದೆ. ಕೇಳುವ ತಾಳ್ಮೆ ನಮ್ಮಲ್ಲಿರಬೇಕಷ್ಟೇ!!