Tuesday, December 31, 2013

ಮರಳಿ ಬಾ ಮನ್ವಂತರವೇ ........


ಅಪಶಕುನದ ಹದಿಮೂರು ಮೂಡಿಸಿದ್ದು ಹದವಿರದ ಅಪಶ್ರುತಿ!! ಸೋತು ಗೆದ್ದವರು ಹಾಗು ಗೆದ್ದು ಸೋತವರ ಕಾಗಕ್ಕ ಗುಬ್ಬಕ್ಕ ಕಥೆಗಳೇ ಜಗತ್ತ್ತಿನೆಲ್ಲೆಡೆ ….!!

ಪರಿವರ್ತನದ ನಿರೀಕ್ಷೆಯಲ್ಲಿ ಕಳೆದ ಮಗದೊಂದು ವರುಷ. ಹಳ್ಳಕ್ಕೆ ಬಿದ್ದಾಗ ಆಳಿಗೊಂದು ಕಲ್ಲು  ಅನ್ನುವಂತೆ  ಜಗತ್ತಿನೆಲ್ಲೆಡೆ ಮುಖಭಂಗಕ್ಕಾದ ಅಮೇರಿಕಾ ಎನ್.ಎಸ್.ಎ  ಸಿದ್ದಾಂತ, ಅಳಿದುಹೋದ ಸಿರಿಯ… ಅಳಿದು ಉಳಿದ ಮಂಡೇಲಾ, ನಲುಗಿದ ಸುಡಾನ್, ತಮ್ಮ  ಇರುವನ್ನು ಮತ್ತೆ  ಮತ್ತೆ ಸಾರಿ ಆತಂಕ ಮಡುಗಟ್ಟಿಸಿದ ಭಯೋತ್ಪಾದನೆ, ಬದಲಾವಣೆ ಪರ್ವ ಕಂಡ ಭಾರತದ ರಾಜಕೀಯ ..... ಆಗಾಗ ಮುನಿದ ಪ್ರಕೃತಿ, ಉಳಿದಂತೆ ಮತ್ತದೇ ಬೇಸರ, ಅದೇ ಏರಿಳಿತದ ಹಗ್ಗ ಜಗ್ಗಾಟ, ಅದೇ ನಿಟ್ಟುಸುರಿನ ನಿನ್ನೆಗಳು, ಭರವಸೆಯ ನಾಳೆಗಳು.

“ಮರೆವೆಗೆ ಸಂದಿವೆ ಇಲ್ಲಿ ಹರುಷದ ಬಣ್ಣಗಳು”

ಉರುಳಿ ಅರಳಿದ ಗದ್ದುಗೆಗಳಲ್ಲಿ ಪವಡಿಸಿದ ಜನ ಸಾಮಾನ್ಯ…. ಕಳಚಿದ ಮುಗ್ದತೆಯಲ್ಲಿ ಮರೆತ ದೇಸೀಯತೆ … ಒಟ್ಟಿನಲ್ಲಿ ವರ್ಷಾಂತ್ಯದಲ್ಲಿ ಅಸ್ಥಿರತೆಯ ಅಂತ್ಯ.

“ನೀಡು ಬಾ ಮನ್ವಂತರವೇ ಭಾವಕೆ ಉಸಿರನ್ನು,ಬರಡು ಹೃದಯಗಳಿಗೆ ಜೀವದ ಹಸಿರನ್ನು…”






Saturday, July 6, 2013

ಅರಿವಿನ ಅರಿಕೆ........



ನನ್ನ ಪ್ರೀತಿಯ ವಿನು,
ಮತ್ತೆ ಅದೇ ಹೊಸತಿಲಲ್ಲಿ... ಅದೇ ಕೊಟೇಷನ್ ಜೊತೆ,     " ಕೆಟ್ಟ ಮೇಲೂ ಬುದ್ದಿ ಕಲಿಯದವರನ್ನು ಆವೀನ್ ಅನ್ನಬಹುದು.
 "ಮನಸಿಲ್ಲದ ಮನಸಿನಿಂದ ಮನಸುಮಾಡಿ ಮಧುರಮನಸಿಗೇ
ಮನಸುಕೊಟ್ಟು ಮನಸನ್ನೆ ಮರೆತು ಬಿಟ್ಟೆಯಾ, ಮನಸುಕೊಟ್ಟು ಮನಸೊಳಗೆ ಕುಳಿತು ಬಿಟ್ಟೆಯಾ"

ಒಪ್ಪುತ್ತೀನಿ.. ನಿನ್ನ ಮನಸ್ಸೂ ನನ್ನದರಂತೆ ಗೊಂದಲದ ಗೂಡಾಗಿದೆ. ಬಹುಮತವಿಲ್ಲದ ಅತಂತ್ರ ಸರ್ಕಾರದ ಸ್ಥಿತಿ ನನ್ನದು. ಸಾಕೆನಿಸುತ್ತದೆ, ಹತ್ತು ಪದಗಳ ಬದಲು ಒಂದು ಚಿತ್ರ. ನಿಜಕ್ಕೂ ನಾನು  ನಾನಾಗಿ ಉಳಿಯದ ಈ ಹೊತ್ತಿನಲ್ಲಿ ನನ್ನಲ್ಲಿ ಭಾವನೆಗಳ ತುಮುಲ. ಆತ್ಮಾವಹಳನೇಕೆ? ಅದರಿಂದ ನಿನಗೂ ಸುಖವಿಲ್ಲ... ನನ್ನ ಸುಖವಂತೂ ಮರೀಚಿಕೆ. ಇರುವುದನ್ನ ಇದೆಯೋ-ಇಲ್ಲವೋ ಎಂದು ಉತ್ತರಿಸಲು ನಾನು ಕೇಳಿದ್ದು ಭರ್ತಿ 1 ದಿನ. ಹೆಡ್ಡ! ಅನುಮಾನವೇ ಇಲ್ಲ. ಒಪ್ಪಿದೆ.. ನೀನು!!!

ಕಾಮನ್ ಸೆನ್ಸ್ ಮತ್ತೆ ನಾನು ಸವತಿಯರು. ಒಂದಾಗಿ ಬಾಳಿದ ಉದಾಹರಣೆ ನೂರರಲ್ಲಿ ಒಮ್ಮೆ. ವಯಸ್ಸು 30ತ್ತಾದರೂ ಹೇಳುವಲ್ಲಿ, ಸಂಭಾಳಿಸುವುದರಲ್ಲಿ 3ರ ಪೊರನ ಎಳಸುತನ. ನೀನು  ಕೇಳಬಹುದು,"ಯೋಚನಾ ಧಾಟಿ ಬೆಳೆಯುವ ಲಕ್ಷಣವಾದರೂ ಇದೆಯಾ?"... ಖಂಡಿತ, ನೀನೇ ಹೇಳಿದೆಯಲ್ಲ.. ಹದ ಮೀರಿದರೆ ವೀಣೆಯೂ ಅಪಶ್ರುತಿ ಮೂಡಿಸುತ್ತೆ... ಮನಸ್ಸು ಏನು ಮಹಾ?. ಕಳೆದುದನ್ನು ಹುಡುಕುವ-ಇರುವುದನ್ನು ಕಳೆಯುವ ಅರ್ಥವಿಲ್ಲದ ಆಲಾಪದಲ್ಲಿ ಅರ್ಥವಿಲ್ಲ. 

"ಪೂಜೆಗೆ ಹೂಗಳನು ಕಟ್ಟೋ ಕೈಗಳಿಗೆ ಗಂಧ ಸೋಕಿದರೆ ಜರಿವುದೆಂತೋ?" ನಿನ್ನದು ಎಂದಿನಂತೇ ಅರ್ಥಗರ್ಭಿತ ಪ್ರಶ್ನೆ. ನನ್ನದು ಅದೇ ಎಳಸು ಬಡಬಡಿಕೆಯಾದಲ್ಲಿ ನನ್ನಲ್ಲಿ ನಿನ್ನಿರುವು ಕನಸೆ. ಇಂದಾದರೂ ಎಚ್ಚೆರಿಕೆಯ ಹಾದಿಯಲ್ಲಿ ನನ್ನ ಅನಾವರಣವಾಗಲೇ ಬೇಕು. ನ್ಯಾಯದೇವತೆಯ ಸನ್ನಿಧಾನದ ಅರಿಕೆಯಲ್ಲೇ ನನ್ನ ಹರಕೆಯೂ ನಡೆಯಲಿ...

"ನಾನು ಹೇಳುವುದೆಲ್ಲವೂ ಸತ್ಯ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ".
ತಿಂದ ಒಂದೆರಡು ಹುಳಿಹಣ್ಣುಗಳ ದೆಸೆಯಿಂದ ಮಾರುಕಟ್ಟೆಯೇ ಹುಳಿಯೆಂದು ಹೊರವುಳಿದವನಿಗೆ ಅಪವಾದವೆಂಬಂತೆ ಕಂಡವಳು ನೀನು. ಬೀಳುವ ಪ್ರತಿ ಪೆಟ್ಟು ವಿಗ್ರಹವಾಗುವ ಬದಲು ನನ್ನನ್ನೇ ಮುರಿದುಹಾಕಿದ ಸಂದರ್ಭದ ಹಳಹಳಿ ಈಗ ಕಳೆದ ಸಂಗತಿ. ಕಳೆದ ಸಂಗತಿಗಳ ಹಪಹಪಿ ಬೇಡ... ಅಂತೆಯೇ ಭೂತದ ಹೊಣೆ ಹೊರದೆ ವರ್ತಮಾನದಲ್ಲಿ ನಾನು ನಿನ್ನಷ್ಟು ಪಾರದರ್ಶಕವಾಗಿ ಸಂಬಂಧಗಳ ವ್ಯಾಖ್ಯಾನಿಸಲಾರೆ. ನನ್ನ ಅಂತರ್ಮುಖತೆ,ಹಟ,ನನ್ನಲ್ಲಿ ನನಗೇ ಇರದ ನಂಬಿಕೆಯಿಂದ ಮೂಡಹೊರಟಿದ್ದು ನನ್ನ-ನಿನ್ನ ಸಂಬಂಧಗಳ ಮಹಾಪ್ರಸ್ಥಾನ. ಪ್ರತೀ ಬಾರಿ ನೀನು ಸೋತು ಗೆದ್ದೆ-ನಾನು ಗೆದ್ದು ಸೋತೆ. ಗೆದ್ದ ಸಂತೋಷ, ಸೋತ ದುಖ್ಹ ಎರಡೂ ನನ್ನಲ್ಲಿ ಉಳಿದಿಲ್ಲ.... ಕೇವಲ ನಾನು ನಾನಾಗಿದ್ದೇನೆ...ಇನ್ನಾದರೂ ಬದುಕುವ ಕಲೆ ಕಲಿಯುವ ಹಂಬಲವಿದೆ. ಮನಸ್ತಾಪ ಮನುಷ್ಯರಿಗೆ ಬರದೇ ಮರಕ್ಕಾ ಬರುತ್ತೆ. ನನಗೆ ವಿನಯ ಬೇಕು... ವಿನಯವಿಲ್ಲದೆ ಜಗವಿಲ್ಲ ಅಂದಮೇಲೆ ಆವೀನನೆಲ್ಲಿ?

ನನ್ನ ತೊಳಲಾಟ ಬಯಲಲ್ಲಿ ಇಟ್ಟ ಹಣತೆ. ಆರುವುದು ಶತಸ್ಸಿದ್ದ.. ಹಿಡಿಯಬಹುದು ಕೊಂಚ ಕಾಲ.  ನಾವು ನಾವಾಗಿರೋಣ ವಿನು... ಇಷ್ಟ-ಕಷ್ಟಗಳ ಗಿಜ್ಞಾಸೆ ಇಷ್ಟೆಲ್ಲಾ ಕುರುಕ್ಷೇತ್ರಕ್ಕೆ ಕಾರಣ. ಫಾರ್ಮ್ಯಾಲಿಟಿನಮ್ಮ ನಡುವೆ ಬಯಸದೆ ಸುಳಿದ ಮುಂದೆಂದೂ ಸುಳಿಯಬಾರದ ಪದ. ಆ  ನಿಟ್ಟಿನಲ್ಲಿ ನನ್ನ ಪ್ರಯತ್ನ ಅವಿರತ. ಮತ್ತೊಮ್ಮೆ ಕೇಳುತ್ತಿದ್ದೇನೆ ವಿನು....  ನೀನು ನನ್ನವಳಾಗಿರುತ್ತೀಯ? ನನ್ನ ಅರ್ಥವಿಲ್ಲದ ಹತಾಶೆ/ಜಿಗುಟುತನವನ್ನ ಮೀರಿ ನಿನ್ನವನಾಗಿರುವ ಹೊಣೆ ನನ್ನದು. ನನ್ನ ಹೊಣೆಗಾರಿಕೆಯ ಶಿಲುಬೆಯನ್ನ ನಾನು ಹೊರುತ್ತೇನೆ.


ನನ್ನ ದಾರಿಯ ನಾನೇ ನೋಡಿ ಹಿಡಿದೆನು ಇನ್ನು
ಕೈ ಹಿಡಿದು ನಡೆಸು ನೀನು
ಮಿರುಗು ಬಣ್ಣಕೆ ಬೆರೆತು ಭಯಮರೆತು ಕೊಬ್ಬಿದೆನು
ಮೆರೆದಾಯ್ತು ನೆನೆಯದಿರು ಹಿಂದಿನದೆಲ್ಲ.

ಇಷ್ಟುದಿನ ಸಲಹಿರುವೆ ಮೂರ್ಖನನು ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ.....

ನಿನ್ನ
ಅವಿ.

Sunday, January 13, 2013

ಸಂಕ್ರಮಣದ ಸಂಕ್ರಾಂತಿಯ ಶುಭಾಶಯಗಳೊಂದಿಗೆ...!!!

ಹಗಲಿನ ಹಬ್ಬದ ಜಾತ್ರೆಯು ಮುಗಿಯಿತು
ರವಿ ಸಂದನು ಪಡುವಣ ಗುಡಿಗೆ
ಕತ್ತಲ ಕಣಿವೆಯೊಳುರುಳುತ ನರಳುವ
ಬೆಳಕಿನ ತೊರೆಯೊಲು ಸಂಜೆಯಿರೆ
ಭೀತಿಯ ಭೂತವು ಜಡೆಯ ಬಿಚ್ಚಿದೊಲು
ಹಿರಿಯಾಲದ ಮರ ನಿಂತಿರಲು
ಕೊಂಬೆ ಕೊಂಬೆಯಲಿ ದುರ್ಮಂತ್ರದವೊಲು
ಎನಿತೋ ಬಾವಲಿ ಜೋತಿರಲು
ಮನ ಬೆದರಿತು ಆ ನೋಟವ ನೋಡಿ
ಜಗವನೆ ಮುಸುಕಿರೆ ಕತ್ತಲ ಮೋಡಿ !
 
 
ಚಣ ಯುಗವಾಯಿತು, ಮನ ಹಾರೈಸಿತು
ಬೆಳಕಿನ ಕುಡಿಯೊಂದನು ಬಯಸಿ
ನಿರಾಶೆಯಾಗಸದಾಸೆಯ ಕಿಡಿಗಳೊ
ಎಂಬೊಲು ತಾರೆಗೆ ಕಣ್ ಸುಳಿಸಿ
ಮಿನುಗಲು, ಕತ್ತಲ ಕೊಳದಿಂದರಳಿತೊ
ಬೆಳಕಿನ ಹೂವೊಂದೆಂಬವೊಲು,
ತಿಂಗಳು ಮೂಡಿತು ಬೆಳಕನು ಸುರಿಸಿತು
ಜಗವೇ ಅಚ್ಚರಿಗೊಂಬವೊಲು
ಕತ್ತಲು ಕರಗಿತು ಬೆಳಕಿನೊಳಿಳಿದು
ಬೆಳಕೊಂದೇ ಹಬ್ಬಿತು ಬೆಳೆ ಬೆಳೆದು.
 
ಬೆಳಕಿನ ಹೂವಿನ ಬಂಡನು ಆಶಿಸಿ
ಹೊರಟವೊ ಕತ್ತಲ ದುಂಬಿಗಳು
ತೇಲುವ ಅಮೃತದ ಕುಂಭದ ಬಯಕೆಗೆ
ದಾನವರೆಸೆದಾ ಬಾಣಗಳೊ
ಎಂಬೊಲು, ಒಂದೊಂದೇ ಬಾವಲಿಗಳು
ಮರದಿಂದಾ ಚಂದ್ರನ ಕಡೆಗೆ
ಹಾರುತ ಹಾರುತ ಕಡೆಗೊಂದಾದುವು
ತಿಂಗಳ ಬೆಳಕಿನ ಕೃಪೆಯೊಳಗೆ
ಬೆರಗಾದುದು ಮನ ದೃಶ್ಯದ ಪರಿಗೆ
ಅನಿರೀಕ್ಷಿತ ಸಂಕ್ರಾಂತಿಯ ಕೃಪೆಗೆ !
 
                                    ಲೇಖಕರು:

Tuesday, January 1, 2013

ಭರವಸೆಯ ಉಷೆ!!!


ಕಳೆದ ವರುಷದ ನೆನಪುಗಳ ಜರಡಿಯಲ್ಲಿ ನನ್ನದೂಂತ ದಕ್ಕಿದ್ದು ಕೇವಲ, "ಭರವಸೆಯ ನಾಳೆಗಳು".
ರಾಜಕೀಯ ಚದುರಂಗದಲ್ಲಿ ಹೂಂಕರಿಸಿ ಮಲಗಿದ ಯುವಜನತೆ, ಸೋತು ಗೆದ್ದ ಪ್ರಪಂಚದ ಜನಜನಾರ್ಧನ(ಜರಾಸಂಧ)ರು, ಎಂದಿನಂತೆ ಮುನಿದ ಪ್ರಕೃತಿ, ಇರುವ ನೀರು ಮಜ್ಜಿಗೆ ಭೂಮಿಗಾಗಿ ನಾನು-ತಾನು  ಎಂದು ರಚ್ಚೆ ಹಿಡಿದ ಭವಿಷ್ಯದ ನಾಯಕರು, ವಾಸ್ತವತೆಗೆ ಕವಿದ, ಢೋಂಗಿ ಬಾಬಾಗಳ ಜೋಳಿಗೆ ತುಂಬಿಸಿದ "ಪ್ರಳಯ..ಪ್ರಳಯ.... ಪ್ರಳಯ....".

ಅರ್ಥವ್ಯರ್ಥಗಳ ಜಿಜ್ಞಾಸೆ  "ದಿ ಪರ್ಫೆಕ್ಟ್ ಸೃಷ್ಟಿಕರ್ತನಿಗಿರಲಿ". ಇನ್ನಾದರೂ ಹೃದಯದ ಬಾಗಿಲಿಗೆ ಜಡಿದ ಬೀಗದ ಮೇಲಿನ ಸಲ್ಲದ ಜಗಳದಲ್ಲಿ ನಾಕವನ್ನು ನರಕಮಾಡುವ ಹುಚ್ಚು ಪ್ರತಿಷ್ಠೆಗಿಂತ, ಹೃದಯಗಳ ನಡುವಿನ ಗಡಿರೇಖೆಗೊಂದು ಟಾಂಗು ಕೊಟ್ಟು ಕಳೆದ ಬೀಗದ ಕೀಲಿ ಹುಡುಕುವಲ್ಲಿ ಮಗ್ನರಾಗೋಣ....

ಪೂರ್ವಜರ ರಕ್ತದೋಕುಳಿ ಕೆಂಪಲ್ಲಿ ನಮ್ಮ ಸುಖದಂತೆ
ನಮ್ಮದರಲ್ಲಿ ನಮ್ಮವರದಾಗದಂತೆ ತಡೆಯುವ ಸಾಮೂಹಿಕ ಹೊಣೆಯ ಶಿಲುಬೆ ಇನ್ನಾದರೂ ಹೊರೋಣ...

"ಬದಲಾವಣೆಯ ಭರವಸೆಯಲ್ಲಿ..... ಹೊಸವರುಷದ ಶುಭಾಶಯಗಳು.